‘ತ್ರಾಟಕ’ ಎಂದರೆ ಯೋಗಾಸನದ ಒಂದು ಭಂಗಿಯ ಹೆಸರು. ಈ ಶೀರ್ಷಿಕೆ ಇಟ್ಟುಕೊಂಡೇ ಶಿವಗಣೇಶ್ ಸಿನಿಮಾ ನಿರ್ದೇಶಿಸಿದ್ದಾರೆ. ಯೋಗದಲ್ಲಿ ಏಕಾಗ್ರತೆಯಿಂದ ಧ್ಯಾನ ಮಾಡಿದರೆ ಮನಸ್ಸು ಹತೋಟಿಗೆ ಬರುತ್ತದೆಯಂತೆ. ‘ಇದನ್ನು ನಾವು ಮೂರನೇ ಕಣ್ಣು ಎಂದು ಕರೆಯುತ್ತೇವೆ’ ಎಂದರು ನಿರ್ದೇಶಕ ಶಿವಗಣೇಶ್.
ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯು ಅಪರಾಧಿಗಳ ಹುಡುಕಾಟ ನಡೆಸುವಾಗ ಸಮಸ್ಯೆಗಳು ಎದುರಾಗುತ್ತವೆ. ಮುಂದೆ ತ್ರಾಟಕದ ಮೂಲಕ ಎಲ್ಲವನ್ನೂ ಪರಿಹರಿಸಿಕೊಂಡು ಚಮತ್ಕಾರದಿಂದ ಅಪರಾಧಿಗಳನ್ನು ಹೇಗೆ ಬಂಧಿಸುತ್ತಾರೆ ಎನ್ನುವುದರ ಸುತ್ತ ಕಥೆ ಹೆಣೆಯಲಾಗಿದೆಯಂತೆ.
ಮರ್ಡರ್ ಮಿಸ್ಟರಿ, ಥ್ರಿಲ್ಲರ್ ಇರುವ ಚಿತ್ರ ಇದು. ಜಯಂತ ಕಾಯ್ಕಿಣಿ, ನಾಗೇಂದ್ರಪ್ರಸಾದ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ಅರುಣ್ ಸುರಧಾ ಸಂಗೀತ ಸಂಯೋಜಿಸಿದ್ದಾರೆ.
ರಾಹುಲ್ ಐನಾಪುರ ಈ ಚಿತ್ರದ ನಾಯಕ ನಟ. ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ಅಜಿತ್ ಜಯರಾಜ್ ಮತ್ತೊಬ್ಬ ನಾಯಕ ನಟ. ‘ಒರಟ’ ಚಿತ್ರದಲ್ಲಿ ನಟಿಸಿದ್ದ ಹೃದಯಾ ಹಲವು ವರ್ಷದ ಬಳಿಕ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಪೊಲೀಸ್ ಪಾತ್ರ ಮಾಡಿರುವ ನಟಿ ದಿಶಾ ಪೂವಯ್ಯ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ನಟ ಅಂಬರೀಷ್ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು. ‘ಹೊಸ ಕಲಾವಿದರು, ತಂತ್ರಜ್ಞರು ಚಿತ್ರರಂಗಕ್ಕೆ ಬರುತ್ತಿರುವುದು ಆರೋಗ್ಯಕರ ಬೆಳವಣಿಗೆ. ಕಲಾವಿದರ ಸಂಘದಲ್ಲಿ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸ ತಂದಿದೆ. ನಮ್ಮ ಕಾಲ ಮುಗೀತು. ಇನ್ನೇನಿದ್ದರೂ ಹೊಸಬರ ಹವಾ ಶುರುವಾಗಲಿ’ ಎಂದು ತಂಡಕ್ಕೆ ಶುಭ ಹಾರೈಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.