ADVERTISEMENT

ಬಂಗಾರದ ನಾಡಲ್ಲಿ ಬಂಗಾರಿ!

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST

ಕಂಠೀರವ ಸ್ಟುಡಿಯೋದ ಕಲ್ಲುಬೆಂಚಿನ ಮೇಲೆ ಪ್ರೇಮಿಗಳಂತೆ ಪೋಸು ನೀಡುತ್ತಾ ಕುಳಿತಿದ್ದರು ಲೂಸ್‌ಮಾದ ಯೋಗೀಶ್ ಮತ್ತು ನಟಿ ರಾಗಿಣಿ. ಆ್ಯಕ್ಷನ್ ಎಂದಾಗ ಕ್ಲಾಪ್ ಮಾಡಿದ್ದು ಶಿವರಾಜ್‌ಕುಮಾರ್.

ಅದು `ಬಂಗಾರಿ~ ಚಿತ್ರದ ಮುಹೂರ್ತ ಸಮಾರಂಭ. ಯೋಗೀಶ್ ಮತ್ತು ರಾಗಿಣಿ ನಾಯಕ ನಾಯಕಿಯರಾಗಿ ಮೊದಲ ಬಾರಿಗೆ ಒಟ್ಟಿಗೆ ಈ ಚಿತ್ರದ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ನಟ ಶಿವರಾಜ್‌ಕುಮಾರ್ ಚಿತ್ರೀಕರಣಕ್ಕೆ ಚಾಲನೆ ನೀಡಿ ಶುಭಹಾರೈಸಿದರು.

ಆ್ಯಕ್ಷನ್ ಕಟ್ ಹೇಳುತ್ತಿರುವ ಮಾ.ಚಂದ್ರು ಅವರಿಗಿದು ಮೊದಲ ಚಿತ್ರ. ನಿರ್ದೇಶಕ ದಯಾಳ್ ಜೊತೆ ಹಾಗೂ ಕೆಲವು ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿದ ಹತ್ತು ವರ್ಷದ ಅನುಭವ ಅವರಿಗಿದೆ. ಸುಮಾರು ನಾಲ್ಕು ವರ್ಷದ ಹಿಂದೆಯೇ ಕಥೆ ಸಿದ್ಧಪಡಿಸಿಕೊಂಡಿದ್ದ ಅವರಿಗೆ ಚಿತ್ರ ಕೊನೆಗೂ ಸೆಟ್ಟೇರುತ್ತಿರುವ ಸಂಭ್ರಮವಿತ್ತು.

ರಾಜಕಾರಣಿಯೊಬ್ಬನಿಗೆ ಅತಿನಿಷ್ಠೆಯಿಂದ ಇರುವ ನಾಯಕನನ್ನು ತನ್ನ ಉನ್ನತಿಗಾಗಿ ಆತ ಹೇಗೆ ಬಳಸಿಕೊಳ್ಳುತ್ತಾನೆ ಎಂಬುದು ಕಥೆಯ ಎಳೆ. ಸತ್ಯ ಘಟನೆಯನ್ನು ಆಧರಿಸಿ ಈ ಕಥೆಯನ್ನು ಹೆಣೆಯಲಾಗಿದೆಯಂತೆ. 65 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸುವ ಇರಾದೆ ಅವರದು. ಚಿತ್ರಕ್ಕಾಗಿ ಕೋಲಾರದಲ್ಲಿ 25 ಅಡಿ ಎತ್ತರದ ಶಿವನ ವಿಗ್ರಹ ನಿರ್ಮಿಸಲಾಗಿದೆ. ಹೆಚ್ಚಿನ ಚಿತ್ರೀಕರಣ ಕೋಲಾರದಲ್ಲಿ ನಡೆಯಲಿದೆ.

ನಟ ಯೋಗೀಶ್ ಚಿತ್ರಕಥೆ ಮೆಚ್ಚಿ ನಟಿಸಲು ಒಪ್ಪಿದ್ದಾಗಿ ಹೇಳಿದರು. ಕಳೆದ ವರ್ಷವೇ ಚಿತ್ರ ಶುರುವಾಗಬೇಕಿತ್ತು ಎಂದ ಅವರಿಗೆ ಹೇಳಲು ಹೆಚ್ಚಿನ ಮಾತುಗಳಿರಲಿಲ್ಲ.

ಶ್ರೀಮಂತ ರಾಜಕಾರಣಿಯ ಮಗಳ ಪಾತ್ರ ನಟಿ ರಾಗಿಣಿ ಅವರದು. ಸನ್ನಿವೇಶಗಳನ್ನು ತಾಂತ್ರಿಕವಾಗಿ ತೋರಿಸುವ ಬಗೆಯನ್ನು ಅವರಿಂದಲೇ ಕೇಳಿದಾಗ ರಾಗಿಣಿ ರೋಮಾಂಚಿತರಾದರಂತೆ. ಚಂದ್ರು ಅತ್ಯಂತ ಪ್ರತಿಭಾವಂತ ನಿರ್ದೇಶಕ ಎಂದು ಪ್ರಶಂಸಿಸಿದರು.

ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಎಲ್ಲಪ್ಪ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸುಮಾರು 22 ವರ್ಷದ ಹಿಂದೆಯೇ ಚಿತ್ರ ನಿರ್ಮಿಸುವ ಆಸೆ ತಮ್ಮಲ್ಲಿತ್ತು. ಆದರೆ ಕಾಲಕೂಡಿ ಬಂದಿರಲಿಲ್ಲ. ಮೂರು ವರ್ಷದ ಹಿಂದೆ ಚಂದ್ರ ಕಥೆ ಹೇಳಿದಾಗ ಇಷ್ಟವಾಯಿತು ಎಂದು ಹೇಳಿದರು.

ಚಿತ್ರದಲ್ಲಿ ಒಟ್ಟು ಎಂಟು ಹಾಡುಗಳಿವೆ. ಎಂ.ನೀಲ್ ಅವುಗಳಿಗೆ ಸ್ವರ ಸಂಯೋಜನೆ ಮಾಡಿದ್ದಾರೆ. ಅಲ್ಲದೆ ಹಾಡುಗಳ ಧ್ವನಿಮುದ್ರಣವೂ ಪೂರ್ಣಗೊಂಡಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.