ADVERTISEMENT

ಬಣ್ಣ ಮತ್ತು ರಾಜಕಾರಣ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 19:30 IST
Last Updated 1 ಮಾರ್ಚ್ 2012, 19:30 IST
ಬಣ್ಣ ಮತ್ತು ರಾಜಕಾರಣ
ಬಣ್ಣ ಮತ್ತು ರಾಜಕಾರಣ   

ಧರ್ಮ ಮತ್ತು ರಾಜಕಾರಣ ಸೇರಿದರೆ ಏನಾಗುತ್ತದೆ? ಒಂದು ಚಿತ್ರ ತಯಾರಾಗುತ್ತದೆ! `ಶ್ರೀಕ್ಷೇತ್ರ ಆದಿಚುಂಚನಗಿರಿ~ ಚಿತ್ರ ಮೂಡಿರುವುದು ಹೀಗೆಯೇ. ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್, ನಟ ಅಂಬರೀಷ್, ಸಂಸದರಾದ ಚೆಲುವರಾಯಸ್ವಾಮಿ, ಎಚ್.ವಿಶ್ವನಾಥ್, ವಿಧಾನಸಭಾ ಸದಸ್ಯರಾದ ಬಿ.ಸಿ.ಪಾಟೀಲ್, ಎಚ್.ಸಿ.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ದೊಡ್ಡರಂಗೇಗೌಡ, ಅಶ್ವತ್ಥನಾರಾಯಣ, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಎಚ್.ಟಿ.ಕೃಷ್ಣಪ್ಪ ಮುಂತಾದವರ ದೊಡ್ಡ ದಂಡೇ ಆದಿಚುಂಚನಗಿರಿಯ ಮಹಿಮೆ ಬಣ್ಣಿಸಲು ಹೊರಟಿದೆ. ಉದ್ಯಮಿ ಅಶೋಕ್ ಖೇಣಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್.ನಾಗಾಭರಣ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮುಂತಾದವರು ಕೂಡ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಈಗಾಗಲೇ ಸುಮಾರು ಒಂದು ಲಕ್ಷ ಧ್ವನಿಮುದ್ರಿಕೆಗಳು ಮಾರಾಟವಾಗಿದ್ದು, ಪ್ಲಾಟಿನಂ ಡಿಸ್ಕ್ ಬಿಡುಗಡೆ ಸಂಭ್ರಮ ಹಂಚಿಕೊಳ್ಳಲು ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ದೊಡ್ಡರಂಗೇಗೌಡರ,ು `ಬಣ್ಣ ಹಚ್ಚಿದಾಗ ಜಾತಿ, ಪಕ್ಷಗಳನ್ನು ಮೀರುವ ಗುಣ ಬರುತ್ತದೆ~ ಎಂದರು. ದೊಡ್ಡರಂಗೇಗೌಡರ ಪತ್ನಿ ರಾಜೇಶ್ವರಿ ಅವರು ಮೈಸೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದ ಪಿಎಚ್.ಡಿ ಪ್ರಬಂಧವನ್ನು ಆಧರಿಸಿ, ಹಲವು ಸಾಕ್ಷ್ಯಚಿತ್ರಗಳನ್ನು ಅಧ್ಯಯನ ನಡೆಸಿ ಈ ಚಿತ್ರ ನಿರ್ಮಿಸಲಾಗಿದೆ.

ಬಾಲಗಂಗಾಧರನಾಥ ಸ್ವಾಮೀಜಿ ಮಾತನಾಡಿ, `ಕ್ಷೇತ್ರದ ವೈಭವವನ್ನು ನೋಡಲು ಜನರು ಆದಿಚುಂಚನಗಿರಿಗೆ ಭೇಟಿ ನೀಡಬೇಕಿತ್ತು. ಈಗ ಭಕ್ತರು ಮನೆಯಲ್ಲೇ ಕುಳಿತು ಕ್ಷೇತ್ರದ ಮಹಿಮೆಯನ್ನು ತಿಳಿಯಬಹುದು. ಇದನ್ನು ಚಿತ್ರತಂಡ ಸಾಧ್ಯಮಾಡಿಕೊಟ್ಟಿದೆ~ ಎಂದು ಹೇಳಿದರು.

ಸಂಗೀತ ನಿರ್ದೇಶಕ ಗುರುಕಿರಣ್ ಒಂದು ಲಕ್ಷ ಸಿಡಿಗಳು ಮಾರಾಟವಾಗುತ್ತವೆ ಎಂದು ನಿರೀಕ್ಷಿಸಿರಲಿಲ್ಲವಂತೆ. ಇದೇ ಮೊದಲ ಬಾರಿಗೆ ಅವರು ಭಕ್ತಿಗೀತೆಯೊಂದನ್ನು ಹಾಡಿದ್ದಾರೆ. `ಹಿಂದೆಲ್ಲಾ ದೊಡ್ಡ ನಟರು ನಟಿಸಿದಾಗ ಇಂಥ ದಾಖಲೆಗಳು ನಿರ್ಮಾಣವಾಗುತ್ತಿದ್ದವು. ಪ್ರಸ್ತುತ ಪರಿಸ್ಥಿತಿಯಲ್ಲಿ ಅದನ್ನು ಸಾಧ್ಯಮಾಡಿಕೊಟ್ಟದ್ದು ಇದೇ ಚಿತ್ರ~ ಎಂದು ಮೆಚ್ಚುಗೆ ಸೂಸಿದರು.

ನಟಿ ಜಯಂತಿ ಅವರು ನಾಗರಹಾವು ಚಿತ್ರದಲ್ಲಿ ಓಬವ್ವನ ಪಾತ್ರ ನಿರ್ವಹಿಸಿದ್ದರು. ಅದರಲ್ಲಿ ಅವರದು ಪುಟ್ಟಪಾತ್ರವಾದರೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿತ್ತು. ಅಂಥದೇ ಜಾದೂ ಚಿತ್ರದಲ್ಲೂ ನಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಅವರು.

ಚಿತ್ರದ ನಿರ್ದೇಶಕ ಓಂ ಸಾಯಿಪ್ರಕಾಶ್ ಜಯಂತಿ ಅವರನ್ನು ಮನಸಾರೆ ಹೊಗಳಿದರು. 1977ರಲ್ಲಿ ಇವರ ನಿರ್ದೇಶನದ ಚಿತ್ರದಲ್ಲಿ ಜಯಂತಿ ಅಭಿನಯಿಸಿದ್ದರು. ವಯಸ್ಸಿನಲ್ಲಿ ಜಯಂತಿ ದೊಡ್ಡವರಾದರೂ ನಿರ್ದೇಶಕರು ತಮ್ಮ ಪಾಲಿನ ಗುರು ಎಂದು ತಿಳಿದು ಸಾಯಿಪ್ರಕಾಶ್ ಕಾಲಿಗೆ ಎರಗಿದ್ದರಂತೆ. ಚಿತ್ರದ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಚಿತ್ರವನ್ನು ಪ್ರೇಕ್ಷಕರು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.