ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮನೆ ಬಾಡಿಗೆ ನೀಡಿಲ್ಲ, ಮನೆ ಮಾಲೀಕನಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ವಿಷಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಪ್ರಕರಣದ ಬಗ್ಗೆ ಮಂಗಳವಾರ ಬೆಂಗಳೂರಿನ 42ನೇ ಸಿಟಿ ಸಿವಿಲ್ ಕೋರ್ಟ್ನಲ್ಲಿ ವಿಚಾರಣೆ ನಡೆದಿದ್ದು ಮೂರು ತಿಂಗಳಲ್ಲಿ ಮನೆ ಖಾಲಿ ಮಾಡುವಂತೆ ನ್ಯಾಯಾಲಯ ಯಶ್ಗೆ ಆದೇಶಿಸಿದೆ.
ಏನಿದು ಪ್ರಕರಣ?
2010ರ ಅಕ್ಟೋಬರ್ 16 ರಿಂದ ಕತ್ರಿಗುಪ್ಪೆಯ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಯಶ್ ಮತ್ತು ಅವರ ಕುಟುಂಬ ಸಮಯಕ್ಕೆ ಸರಿಯಾಗಿ ಬಾಡಿಗೆ ನೀಡದೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಮನೆ ಮಾಲೀಕ ಮುನಿಪ್ರಸಾದ್ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣ
ಮನೆ ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆ ಮತ್ತು ಬಾಡಿಗೆ ತರ್ಕದಲ್ಲಿ ನಟ ಯಶ್ ಅವರ ತಾಯಿ ಪುಷ್ಪಾ ವಿರುದ್ದ ಮನೆ ಮಾಲೀಕರು ದೂರು ನೀಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಪುಷ್ಪಾ ಅವರು ಮೂರು ತಿಂಗಳಲ್ಲಿ ಮನೆ ಖಾಲಿ ಮಾಡುವಂತೆ ಮತ್ತು ಮನೆ ಬಾಡಿಗೆ ಬಾಕಿ ₹9ಲಕ್ಷ 60 ಸಾವಿರ ಮನೆ ಮಾಲೀಕರಿಗೆ ಪಾವತಿಸುವಂತೆ ಹಾಗೂ ಮುಂಗಡವಾಗಿ ಪಡೆದಿದ್ದ ₹4 ಲಕ್ಷ ರುಪಾಯಿಯನ್ನು ಬಾಡಿಗೆದಾರರಿಗೆ ಮರಳಿಸುವಂತೆ ಮನೆ ಮಾಲೀಕರಿಗೆ ಆದೇಶಿಸಿದೆ. ಯಶ್ ತಾಯಿಯಿಂದ ನಮಗೆ ₹21.37 ಲಕ್ಷ ರು ಬಾಡಿಗೆ ಹಣ ಬರಬೇಕಿದೆ ಎಂದು ಮನೆ ಮಾಲೀಕರು ತಮ್ಮ ದೂರಿನಲ್ಲಿ ತಿಳಿಸಿದ್ದರು.
ಆರೋಪ ಏನು?
2010ರ ಅಕ್ಟೋಬರ್ನಲ್ಲಿ ಯಶ್ ಅವರ ಕುಟುಂಬಕ್ಕೆ ಮನೆಯನ್ನು 11 ತಿಂಗಳ ಅವಧಿ ಭೋಗ್ಯಕ್ಕೆ ನೀಡಲಾಗಿತ್ತು. 2011ರಲ್ಲಿ ಭೋಗ್ಯದ ಅವಧಿ ಮುಗಿದ ನಂತರ ಬಾಡಿಗೆ ನೀಡಬೇಕಿತ್ತು. ಕೆಲವು ತಿಂಗಳುಗಳ ಕಾಲ ಮಾತ್ರ ಅಲ್ಪಸ್ವಲ್ಪ ಬಾಡಿಗೆ ನೀಡಿದ ಆ ಕುಟುಂಬ ಆನಂತರ ಬಾಡಿಗೆಯನ್ನೂ ನಿಲ್ಲಿಸಿಬಿಟ್ಟಿದ್ದಾರೆ. ಮನೆಯನ್ನೂ ಖಾಲಿ ಮಾಡದೆ ₹21.37 ಲಕ್ಷ ರು. ಬಾಡಿಗೆ ಉಳಿಸಿಕೊಂಡಿದ್ದಾರೆ. ಬಾಡಿಗೆ ಕೊಡಿ ಎಂದು ಕೇಳಿದರೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಮುನಿಪ್ರಸಾದ್ ಆರೋಪಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.