ADVERTISEMENT

ಸಾಧು `ಗೆರಿಲ್ಲಾ' ತಂತ್ರ

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 19:59 IST
Last Updated 13 ಜೂನ್ 2013, 19:59 IST

`ಗೆರಿಲ್ಲಾ' ಮಾದರಿಯಲ್ಲಿ ದಾಳಿ ನಡೆಸಿದ್ದರು ಸಾಧು ಕೋಕಿಲ. ಕಂಠೀರವ ಸ್ಟುಡಿಯೋದ ಕತ್ತಲಿನ ಕಟ್ಟಡದೊಳಗೆ ನಾಲ್ಕೂ ದಿಕ್ಕಿನಿಂದ ಸಾಧು ಆಕ್ರಮಣ ಎಸಗಿದ್ದರು. ನಾಲ್ಕು ದಿಕ್ಕಿನಲ್ಲಿ ನಾಲ್ಕು ಪರದೆಗಳು. ಸಾಧು ಕೋಕಿಲ ಮತ್ತು ನಿರ್ದೇಶಕ ಮುತ್ತು ಮಾತಿನ ಜುಗಲ್‌ಬಂದಿ. `ಗೆರಿಲ್ಲಾ' ವಿಶಿಷ್ಟ ಚಿತ್ರ ಎನ್ನುವುದನ್ನು ಸುದ್ದಿಗೋಷ್ಠಿಯನ್ನು ವಿಭಿನ್ನವಾಗಿ ಆಯೋಜಿಸುವ ಮೂಲಕ ಸಾಬೀತುಪಡಿಸುವ ಉಮೇದು ಅವರಲ್ಲಿತ್ತು.

ಸಾಧು ಕಥನದಲ್ಲಿ ಮಾತ್ರ ಪ್ರಯೋಗಕ್ಕೆ ಕೈಹಾಕಿಲ್ಲ. ತೆರೆಯ ಹಿಂದೆ ಕೆಲಸ ಮಾಡಿ ಹೆಸರಾದ ತಂತ್ರಜ್ಞರನ್ನು ಕ್ಯಾಮೆರಾ ಮುಂದೆ ಬಣ್ಣಹಚ್ಚಿ ನಿಲ್ಲಿಸುತ್ತಿದ್ದಾರೆ. ಭಗವಾನ್, ರಾಜೇಂದ್ರಸಿಂಗ್ ಬಾಬು, ಡಿ. ರಾಜೇಂದ್ರಬಾಬು, ನಾಗತಿಹಳ್ಳಿ ಚಂದ್ರಶೇಖರ್, ಉಪೇಂದ್ರ ಸೇರಿದಂತೆ ಸುಮಾರು 25 ನಿರ್ದೇಶಕರು `ಗೆರಿಲ್ಲಾ'ದಲ್ಲಿ ನಟಿಸುತ್ತಿದ್ದಾರೆ.

ಎಲ್ಲರದೂ ಬಂದು ಹೋಗುವ ಪಾತ್ರಗಳು. ಸಾಧು ಕೋಕಿಲ ನಿರ್ದೇಶಕನಾಗಬೇಕೆಂಬ ತಮ್ಮ ಶಿಷ್ಯ ಮುತ್ತುವಿನ ಬಯಕೆಗೆ `ಗೆರಿಲ್ಲಾ'ದ ಮೂಲಕ ನೀರೆರೆಯುತ್ತಿದ್ದಾರೆ. ಮೂರನೇ ಬಾರಿ ಚಿತ್ರ ನಿರ್ಮಾಣಕ್ಕೆ ಕೈಹಾಕಿರುವ ಸಾಧು, ಸಂಗೀತ ಹೊಸೆಯುವ ಜವಾಬ್ದಾರಿಯನ್ನೂ ಸ್ವತಃ ಹೊತ್ತುಕೊಂಡಿದ್ದಾರೆ.

`10ನೇ ಕ್ಲಾಸ್ ಎ ಸೆಕ್ಷನ್' ಚಿತ್ರದಲ್ಲಿ ನಟಿಸಿದ್ದ ನವೀನ್ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ಮೂವರು ಸ್ನೇಹಿತರು, `ರಾಧನ ಗಂಡ' ಚಿತ್ರದ ನಿರ್ದೇಶಕ ಮುರುಗನ್, `ನೈಂಟಿ' ನಿರ್ದೇಶಕ ಲಕ್ಕಿ ಶಂಕರ್, ಜಿಮ್ ಮಾಸ್ಟರ್ ನವೀನ್ ಕುಮಾರ್. ಇದಲ್ಲದೆ ಇನ್ನೂ ಮೂರು ಪ್ರಮುಖ ಪಾತ್ರಗಳು ಚಿತ್ರದಲ್ಲಿವೆ.

ಆ ಪಾತ್ರಗಳಿಗೆ ಸಾಧು ಕೋಕಿಲ, ಓಂಪ್ರಕಾಶ್‌ರಾವ್ ಮತ್ತು ನಾಗಶೇಖರ್ ಪರಕಾಯ ಪ್ರವೇಶ ಮಾಡಲಿದ್ದಾರೆ. ಅಂದಹಾಗೆ, ಚಿತ್ರಕ್ಕೆ ನಾಯಕಿಯಿನ್ನೂ ಸಿಕ್ಕಿಲ್ಲ. ಸ್ಪಷ್ಟ ಕನ್ನಡ ಬಲ್ಲ, ಹೊಸ ಹುಡುಗಿಯನ್ನು ಹುಡುಕಿಕೊಡಿ ಎನ್ನುವುದು ಸಾಧು ಕೋರಿಕೆ.

ಚಿತ್ರದಲ್ಲಿ ಆ್ಯಕ್ಷನ್ ಇದೆ, ಆದರೆ ಹಿಂಸೆಯ ವೈಭವೀಕರಣವಿಲ್ಲ. ಸ್ನೇಹಿತರ ಗುಂಪಿನೊಳಗೆ ನಡೆಯುವ ಚಿಕ್ಕ ಕಥೆಯದು ಒಂದು ದಿಕ್ಕಾದರೆ, ಉಳಿದ ಭಾಗ ಪರಿಶುದ್ಧ ಪ್ರೀತಿ ಎಂದರು ಅವರು.

`ಗೆರಿಲ್ಲಾ' ಪಯಣದ ಕಥನವಂತೆ. ಬೆಂಗಳೂರಿನಿಂದ ಶುರುವಾಗುವ ಪಯಣ ಹೈವೇಯಲ್ಲಿ, ಕಾಡುಮೇಡುಗಳನ್ನು ಅಲೆದು ಭಟ್ಕಳವನ್ನು ತಲುಪುತ್ತದೆ. ಕಂಡು ಕೇಳಿದ ವಾಸ್ತವಕ್ಕೆ ಹತ್ತಿರವಾದ ಸಂಗತಿಗಳೇ ಚಿತ್ರದಲ್ಲಿದೆ ಎಂದರು ನಿರ್ದೇಶಕ ಮುತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.