ತಮಗೆ ಅರಿವಿಲ್ಲದಂತೆಯೇ ರೌಡಿಸಂಗೆ ಇಳಿಯುವ ಹುಡುಗರು, ರಕ್ತಪಾತ, ಬಿಡುವಿನಲ್ಲಿ ಪ್ರೀತಿಯ ಸೆಳೆತ. ಈ ಬಗೆಯ ಕಥನ ಹೊಂದಿರುವ ಚಿತ್ರಗಳ ಸಾಲಿಗೆ ಹೊಸ ಸೇರ್ಪಡೆ `ಸುಕ್ಕ'.
`ಕರುನಾಡ ನವಸೇನೆ' ಎಂಬ ತಂಡ ಕಟ್ಟಿಕೊಂಡಿರುವ ಕಿಶೋರ್ ತಮ್ಮಂದಿಗಿರುವ ಹುಡುಗರಿಗಾಗಿ ಸಿನಿಮಾ ನಿರ್ಮಿಸಬೇಕೆಂದು ಹಲವು ವರ್ಷಗಳಿಂದ ಬಯಸಿದ್ದವರು. ರಂಗ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದ 20 ಯುವಕರು ಅವರ ಜೊತೆಗಿದ್ದರು. ಅವರೆಲ್ಲರನ್ನೂ ಸಿನಿಮಾ ತೆರೆಮೇಲೆ ಒಟ್ಟಿಗೆ ತರಬೇಕೆಂಬ ಅವರ ಆಸೆ ಈ ಚಿತ್ರದ ಮೂಲಕ ಈಡೇರುತ್ತಿದೆ. ನಿರ್ಮಾಣ ಮಾತ್ರವಲ್ಲ, ಕಿಶೋರ್ ಚಿತ್ರದಲ್ಲಿ ಖಳನಾಯಕನ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ.
ಆ್ಯಕ್ಷನ್ ಕಟ್ ಹೇಳುತ್ತಿರುವವರು `ಸಲಗ' ಮತ್ತು `ಇಷ್ಟಾರ್ಥ' ಎಂಬ ಇನ್ನೂ ಬಿಡುಗಡೆಯ ಭಾಗ್ಯ ಕಾಣದ ಚಿತ್ರಗಳನ್ನು ನಿರ್ದೇಶಿಸಿರುವ ಪ್ರಾಣ್. `ರೌಡಿಸಂಗೆ ಕಾಲಿಟ್ಟು, ಅದರಿಂದ ಹೊರಬರುವ ಪ್ರಯತ್ನದಲ್ಲಿ ಹೆಣಗಾಡುವ ಹುಡುಗರ ಕಥೆಯಿದು' ಎಂದರು ಪ್ರಾಣ್.
ಬಜನ್ ಬೋಪಣ್ಣ, ಶಿವಕುಮಾರ್, ರೋಹಿತ್, ತ್ರಿಶೂಲ್ ಮತ್ತು ಕೃಷ್ಣ `ಸುಕ್ಕ'ದ ಐವರು ನಾಯಕರು. ಕೃಷ್ಣ ಅವರಿಗಿದು ಮೊದಲ ಅನುಭವ. ಉಳಿದ ನಟರು ಹಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡವರು.
ಐವರು ನಾಯಕರಿಗೆ ಮೂವರು ನಾಯಕಿಯರು. ಮಾನಸಿ ಮಧ್ಯಮವರ್ಗದ ಯುವತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. `ಮೊಗ್ಗಿನ ಮನಸ್ಸು', `ನಾಗವಲ್ಲಿ', `ಶಿವಕಾಶಿ', `ಹಾಗೇ ಸುಮ್ಮನೆ' ಮುಂತಾದ ಚಿತ್ರಗಳಲ್ಲಿ ನಟಿಸಿರುವ ಮಾನಸಿ ಚಿತ್ರರಂಗದಲ್ಲಿ ಕಾಣಿಸಿಕೊಂಡದ್ದು ಕಡಿಮೆ. ಹೊಸ ಮುಖ ದೀಪಿಕಾ ದಾಸ್ರದ್ದು ಆಧುನಿಕ ಜೀವನಶೈಲಿಯ ಯುವತಿಯ ಪಾತ್ರ. ಮಮತಾ ರಾವತ್ವೇಶ್ಯೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. `ದಂಡುಪಾಳ್ಯ' ಮತ್ತು `ಪರಾರಿ' ಚಿತ್ರಗಳಲ್ಲಿಯೂ ಅವರು ವೇಶ್ಯೆ ಪಾತ್ರಕ್ಕೆ ಬಣ್ಣಹಚ್ಚಿದ್ದರು.
ಐದು ಹಾಡುಗಳು ಚಿತ್ರದಲ್ಲಿದ್ದು ಮಧುರ ನಾಯಿರಿ ಸಂಗೀತ ಹೊಸೆಯುತ್ತಿದ್ದಾರೆ. ಎಂ.ಎಸ್. ಶ್ಯಾಂ ಛಾಯಾಗ್ರಹಣ ಚಿತ್ರಕ್ಕಿದೆ. ಬೆಂಗಳೂರು, ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ನಡೆಸುವುದು ಚಿತ್ರತಂಡದ ಉದ್ದೇಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.