ADVERTISEMENT

ಸ್ವಾಮೀಜಿ ಕತೆ ಅಲ್ಲ...

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 19:30 IST
Last Updated 18 ಅಕ್ಟೋಬರ್ 2012, 19:30 IST

`ನಮ್ಮದು ಯಾವುದೇ ಸ್ವಾಮೀಜಿಯ ಜೀವನಕ್ಕೆ ಸಂಬಂಧಪಟ್ಟ ಸಿನಿಮಾ ಅಲ್ಲ. ದೇವರ ದುರ್ಬಳಕೆ ಸಮಾಜದಲ್ಲಿ ಹೇಗೆ ನಡೆಯುತ್ತಿದೆ ಎಂಬುದಕ್ಕೆ ಸಿನಿಮಾದಲ್ಲಿ ಆದ್ಯತೆ ನೀಡಲಾಗಿದೆ.

ಉನ್ನತ ವರ್ಗದಿಂದ ಹಿಡಿದು ಬಡವರ್ಗದವರು ಹೇಗೆ ದೇವರ ಹೆಸರನ್ನು ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ತೋರಿಸಲಾಗಿದೆಯೇ ಹೊರತು ಇದು ಯಾರಿಗೂ ವೈಯಕ್ತಿಕವಾಗಿ ಸಂಬಂಧಪಡದ ಸಿನಿಮಾ~ ಎಂದರು `ದೇವ್ರಾಣೆ~ ನಿರ್ದೇಶಕ ಲಕ್ಕಿ ಶಂಕರ್.

ಅದು, `ದೇವ್ರಾಣೆ~ ಚಿತ್ರದ ಸೀಡಿ ಬಿಡುಗಡೆ ಸಂದರ್ಭ.
ಖ್ಯಾತ ನಿರ್ದೇಶಕ ಜಿ.ವಿ.ಅಯ್ಯರ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ದುಡಿಯುತ್ತಿದ್ದ ಸಮಯದಲ್ಲಿ ಲಕ್ಕಿ ಶಂಕರ್, ಈ ಚಿತ್ರದ ಕತೆಯನ್ನು ಅವರಿಗೆ ಹೇಳಿದ್ದರಂತೆ. ಅವರು ಬಹಳ ಮೆಚ್ಚಿಕೊಂಡಿದ್ದರಂತೆ. ಗುರುಗಳ ಮೆಚ್ಚುಗೆ, ಆಶೀರ್ವಾದವನ್ನು ಸ್ಫೂರ್ತಿಯಾಗಿ ಪರಿಗಣಿಸಿದ ಅವರು, ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದೀಗ ಚಿತ್ರೀಕರಣ ಪೂರೈಸಿದ್ದಾರೆ. ನವೆಂಬರ್ ಮೊದಲ ವಾರದಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶ ಅವರದು. ಚಿತ್ರದಲ್ಲಿ ಮನರಂಜನೆಯಷ್ಟೇ ಸಂದೇಶವೂ ಮುಖ್ಯ ಎಂಬ ಬದ್ಧತೆ ಅವರದು.

ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ಕೆಲಸವನ್ನು ಮೆಚ್ಚಿಕೊಂಡ ಅವರು ಛಾಯಾಗ್ರಾಹಕ ಎಂ.ಆರ್. ಸೀನು ಅವರು ಬೆಳಕು ಮತ್ತು ಬಣ್ಣಗಳನ್ನು ಕ್ಯಾಮೆರಾದಲ್ಲಿ ನಿಭಾಯಿಸಿರುವ ರೀತಿಯನ್ನು ಪ್ರಶಂಸಿಸಿದರು.

`ದೇವ್ರಾಣೆ~ಯ ಪ್ರಮುಖ ಪಾತ್ರದಲ್ಲಿ ನಟಿಸಿರುವ ರವಿಶಂಕರ್ ಅವರಿಗೆ ಸಂಭಾಷಣೆ ಬರೆದಿರುವ ತಬಲಾ ನಾಣಿ ಅವರ ಮಾತುಗಳು ಇಷ್ಟವಾಗಿವೆ. ಗಾಯಕರಾದ ಅವರು ಚಿತ್ರದಲ್ಲಿ `ಮೈ ನೇಮ್ ಇಸ್ ಚಿಟ್ಟೆ ಸ್ವಾಮಿ~ ಎಂಬ ಹಾಡನ್ನು ಹಾಡಿದ್ದಾರಂತೆ. ನೀತು ಅವರಿಗೆ ತಾವು ಇದುವರೆಗೆ ನಟಿಸಿರುವ 22 ಸಿನಿಮಾಗಳಲ್ಲಿ `ದೇವ್ರಾಣೆ~ ವಿಭಿನ್ನ ಮತ್ತು ಆಸಕ್ತಿಕರ ಸಿನಿಮಾ ಎನಿಸಿದೆ.

ಸಂಗೀತ ನೀಡಿರುವ ಲಯ ಕೋಕಿಲ ಅವರು ರವಿಶಂಕರ್ ಅವರೊಂದಿಗೆ `ಮೈ ನೇಮ್ ಇಸ್ ಚಿಟ್ಟೆಸ್ವಾಮಿ~ ಹಾಡನ್ನು ಹಾಡಲು ಆರ್ಕೆಸ್ಟ್ರಾ ಹುಡುಗಿ ರೇಷ್ಮಾ ಅವರನ್ನು ಹುಡುಕಿ ತಂದರಂತೆ. ಚಿತ್ರದಲ್ಲಿ ಇರುವುದು ಎರಡೇ ಹಾಡು. `ಮೈ ನೇಮ್ ಇಸ್ ಚಿಟ್ಟೆಸ್ವಾಮಿ~ ಹಾಡನ್ನು ರಾಮ್ ನಾರಾಯಣ್ ಬರೆದಿದ್ದರೆ, ಮತ್ತೊಂದು ಹಾಡಾದ `ಹುಚ್‌ಮುಂಡೆ ಮದುವೇಲಿ..~ ಹಾಡನ್ನು ಗುರುರಾಜ ಹೊಸಕೋಟೆ ಬರೆದಿದ್ದಾರೆ. ಎರಡು ಗೀತೆಗಳು ಈಗಾಗಲೇ ಸಹೃದಯರಿಗೆ ಇಷ್ಟವಾಗಿವೆಯಂತೆ. ನಿರ್ಮಾಪಕ ಶಿವು ಕಬ್ಬಿನ, ತಬಲಾ ನಾಣಿ, ನೃತ್ಯ ನಿರ್ದೇಶಕ ಮಾಲೂರು ಶ್ರೀನಿವಾಸ, ಛಾಯಾಗ್ರಾಹಕ ಸೀನು ಸಮಾರಂಭದಲ್ಲಿ ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.