ADVERTISEMENT

ಹಾರರ್ ‘ಕೌಸಲ್ಯ’

​ಪ್ರಜಾವಾಣಿ ವಾರ್ತೆ
Published 21 ಜನವರಿ 2016, 19:38 IST
Last Updated 21 ಜನವರಿ 2016, 19:38 IST
ಹಾರರ್ ‘ಕೌಸಲ್ಯ’
ಹಾರರ್ ‘ಕೌಸಲ್ಯ’   

ಕನ್ನಡದ ಹಾರರ್ ಚಿತ್ರಗಳ ಪಟ್ಟಿಗೆ ಮತ್ತೊಂದು ಹೊಸ ಸೇರ್ಪಡೆ ‘ಕೌಸಲ್ಯ’. ಸದ್ದಿಲ್ಲದೆಯೇ ಚಿತ್ರೀಕರಣ ಪೂರ್ಣಗೊಳಿಸಿರುವ ‘ಕೌಸಲ್ಯ’ ಚಿತ್ರತಂಡ ಇತ್ತೀಚೆಗೆ ಸಿನಿಮಾದ ಗೀತೆಗಳ ಧ್ವನಿಮುದ್ರಿಕೆ ಬಿಡುಗಡೆ ಮಾಡಿತು. ಹಾರರ್ ಸಿನಿಮಾಗಳು ಎಂದರೆ ಕಥೆಯಲ್ಲಿ ತಿರುವು–ಮುರುವು ಎನ್ನುವುದನ್ನು ಬಿಡಿಸಿ ಹೇಳಬೇಕಾದ್ದಿಲ್ಲ. ಇದೇ ಮಾದರಿಯಲ್ಲಿ ‘ನಾವು ಅಂದುಕೊಂಡಿದ್ದೆಲ್ಲ ಆಗುವುದಿಲ್ಲ’ ಎನ್ನುವ ಸಾಮಾನ್ಯ ಎಳೆಯನ್ನು ಇಟ್ಟುಕೊಂಡು ‘ಕೌಸಲ್ಯ’ ಚಿತ್ರವನ್ನು ರೂಪಿಸಲಾಗಿದೆಯಂತೆ.

ಬಳ್ಳಾರಿಯ ಪ್ರೇಮಿಗಳು ಮದುವೆಯಾಗಲು ತಿರುಪತಿಗೆ ಹೋಗುವಾಗ ಕೆಲವು ಘಟನೆಗಳು ನಡೆಯುತ್ತವೆ. ಆ ಘಟನೆಗಳು ಏನು? ಮುಂದೇನು ಆಗುತ್ತದೆ? ಎನ್ನುವ ಕೌತುಕ–ಭಯದ ಹಳಿಯ ಮೇಲೆ  ಚಿತ್ರವನ್ನು ರೂಪಿಸಲಾಗಿದೆಯಂತೆ. ಮಹೇಶ್‌ ಅಪಲಾ ಸಿನಿಮಾದ ನಿರ್ದೇಶಕರು. ಅವರು ನಾಲ್ಕು ಹಾಡುಗಳಿಗೆ ಸಂಗೀತವನ್ನೂ ಸಂಯೋಜಿಸಿದ್ದಾರೆ. ನಿರ್ದೇಶಕರಾಗಿ ಇದು ಅವರ ಮೊದಲು ಸಿನಿಮಾ. 

ಚಿತ್ರತಂಡದಲ್ಲಿ ಇರುವ ಜೈಜಗದೀಶ್, ಅಪೂರ್ವ ಮತ್ತು ಕೆಂಪೇಗೌಡ ಅವರನ್ನು ಹೊರತುಪಡಿಸಿ ಉಳಿದವರೆಲ್ಲರು ತೆಲುಗಿನವರು. ಸೀಡಿ ಬಿಡುಗಡೆ ಸಮಾರಂಭದಲ್ಲಿ ‘ಹೆಚ್ಚಾಗಿ ಕನ್ನಡ ಬರೋಲ್ಲ. ಮುಂದೆ ಕಲಿಯುತ್ತೇವೆ’ ಎನ್ನುವ ಜಾಮೀನು ಕೋರಿಕೆಯ ಮಾತುಗಳೇ ಹೆಚ್ಚು ಕೇಳಿಬಂದವು. ಅಂದಹಾಗೆ, ಕನ್ನಡ ಮತ್ತು ತೆಲುಗಿನಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್‌.ಡಿ. ಗಂಗರಾಜು ‘ಕೌಸಲ್ಯ’ ಚಿತ್ರದ ಸೀಡಿ ಬಿಡುಗಡೆ ಮಾಡಿದರು. ‘ಚಿತ್ರರಂಗಕ್ಕೆ ಹೊಸಮುಖಗಳು ಬರುತ್ತಿರುವುದು ಸಂತಸ ತಂದಿದೆ. 2015ರಲ್ಲಿ ಹಲವು ಹೊಸ ಚಿತ್ರಗಳು ಹಿಟ್ ಆಗಿದೆ. ಇದೇ ರೀ ಕೌಸಲ್ಯ ಎಲ್ಲರಿಗೂ ತಲುಪಲಿ’ ಎಂದವರು ಹಾರೈಸಿದರು.

ಬೆಂಗಳೂರು, ಬಳ್ಳಾರಿ, ತಿರುಪತಿ, ಚಿತ್ತೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಶರತ್‌ ಕಲ್ಯಾಣ್ ನಾಯಕ. ಬಾಂಬೆ ಮೂಲದ ಶ್ವೇತಾ ಕಡೆ ನಾಯಕಿ. ಆಂಧ್ರ ಮೂಲದ ವ್ಯಾಪಾರಿಗಳಾದ ಮಧುಕುಮಾರ್‌ ರೆಡ್ಡಿ, ಸುಧೀರ್ ರೆಡ್ಡಿ ಚಿತ್ರದ ನಿರ್ಮಾಪಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.