ADVERTISEMENT

ಹೊಸ ಪಥದಲ್ಲಿ ಗೊಂಬೆಗಳು...

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 19:59 IST
Last Updated 27 ಡಿಸೆಂಬರ್ 2012, 19:59 IST
ಪಾವನಾ ಮತ್ತು ಅರುಣ್
ಪಾವನಾ ಮತ್ತು ಅರುಣ್   

ಎರಡು ವರ್ಷಗಳ ಹಿಂದೆ ಸ್ಕ್ರಿಪ್ಟ್ ಹಿಡಿದುಕೊಂಡು ಅಲೆದು ಸುಸ್ತಾದ ಸಂತೋಷ್, ಇದೀಗ ಚಿತ್ರ ಪೂರ್ಣಗೊಳಿಸಿದ ಸಂತೋಷದಲ್ಲಿದ್ದಾರೆ. ಅವರ ಚಿತ್ರದ ಹೆಸರು `ಗೊಂಬೆಗಳ ಲವ್'. `ಎರಡು ವರ್ಷಗಳ ಹಿಂದೆ ಕತೆ ಮಾಡಿದೆ. ಅದನ್ನು ತಮಿಳಿನ `ಪರುತ್ತಿವೀರನ್' ನಿರ್ದೇಶಕ ಅಮೀರ್ ಸುಲ್ತಾನ್ ಅವರಿಗೂ ಹೇಳಿದೆ. ಅವರು ಇಷ್ಟಪಟ್ಟರು.

ಆದರೆ ಕಾಯಬೇಕು ಎಂದರು. ಆರು ತಿಂಗಳು ಕಾದೆ. ಮತ್ತೆ ಕರ್ನಾಟಕಕ್ಕೆ ಬಂದು ನಿರ್ಮಾಪಕರು ಸಿಗದೇ ಹೋದಾಗ ಗೆಳೆಯರೊಡಗೂಡಿ ನಿರ್ಮಾಪಕರಲ್ಲಿ ಒಬ್ಬನಾದೆ' ಎಂದು ಸಿನಿಮಾ ಆರಂಭವಾದ ಕತೆಯನ್ನು ಹೇಳಿಕೊಂಡರು ಸಂತೋಷ್. ಸದ್ಯ ಡಿಟಿಎಸ್ ಅಳವಡಿಕೆ ಹಂತದಲ್ಲಿ ಇರುವ ಚಿತ್ರ ಮುಂದಿನ ತಿಂಗಳು ತೆರೆಗೆ ಬರಲಿದೆಯಂತೆ.

`ಇದು ಕನಸುಗಳು ಮತ್ತು ಭಾವನೆಗಳು ತುಂಬಿದ ಸಿನಿಮಾ. ಪ್ರೀತಿ ಎಂಬ ಅಂಶದಿಂದ ಚಿತ್ರ ಅಂತ್ಯ ಕಾಣುತ್ತದೆ. ಹಾಗೆಂದು ಪ್ರೀತಿಯೊಂದೇ ಚಿತ್ರದಲ್ಲಿ ಇಲ್ಲ' ಎಂದು ಹೇಳಿ ಕುತೂಹಲ ಕಾಯ್ದುಕೊಂಡರು ಸಂತೋಷ್. ಚಿತ್ರ ಗೆಲುವನ್ನು ಸಾಧಿಸುತ್ತದೆ ಎಂಬ ಬಗ್ಗೆ ಅವರಿಗೆ ಸಂಪೂರ್ಣ ಭರವಸೆ.

ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಅರುಣ್ ಚಿತ್ರದ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅದನ್ನು ನಾಯಕ ಪಾತ್ರ ಎಂದು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ. ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅವರು ಗೆಳೆಯ ಸಂತೋಷ್ ಒತ್ತಾಯಕ್ಕೆ ಮಣಿದು ಪಾತ್ರ ನಿರ್ವಹಿಸಿದರಂತೆ.

`ಅದ್ವೈತ' ಮತ್ತು `ಜಟ್ಟ' ಚಿತ್ರಗಳಲ್ಲಿ ನಟಿಸಿದ್ದ ಪಾವನಾ ಅವರಿಗೆ ಈ ಚಿತ್ರದ ನಾಯಕಿಯಾಗುವ ಅವಕಾಶ ಸಿಕ್ಕಿದೆ. ಅದನ್ನು ಖುಷಿಯಿಂದ ಹೇಳಿಕೊಂಡು ಅವರು ಅಭಿನಯದ ಸಲಹೆ ನೀಡಿದ ಹಿರಿಯರಿಗೆ ವಂದಿಸಿದರು.ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವ ಶ್ರುತಿ ಅವರಿಗೆ ಚಿತ್ರದ ಅನುಭವ ವಿಶಿಷ್ಟ ಎನಿಸಿದೆ. `ಸಂತೋಷ್ ಅವರು ತೋರಿದ ಪ್ರೀತಿ ಮತ್ತು ಗೌರವಕ್ಕೆ ತಲೆಬಾಗಿ ಈ ಪಾತ್ರ ಒಪ್ಪಿಕೊಂಡಿರುವೆ. ವಿಶಿಷ್ಟ ಕನಸುಗಳಿರುವ ಈ ತಂಡ ಚಿತ್ರೋದ್ಯಮಕ್ಕೆ ಸಾಕಷ್ಟು ಕೊಡುಗೆಗಳನ್ನು ಕೊಡಲಿದೆ' ಎಂದು ಪ್ರಶಂಸಿಸಿದರು.

ಅಚ್ಯುತ ಕುಮಾರ್ ಅವರಿಗೂ ಈ ಯುವ ತಂಡದಲ್ಲಿ ನಟಿಸಿದ ಅನುಭವ ಖುಷಿ ನೀಡಿದೆ. ಚಿತ್ರದಲ್ಲಿ ಇರುವ ಎರಡೇ ಹಾಡುಗಳಿಗೆ ಸಾಹಿತ್ಯ ರಚಿಸಿರುವ ನಾಗೇಂದ್ರ ಪ್ರಸಾದ್ ಈ ಸಿನಿಮಾ ಯಶಸ್ವಿಯಾದರೆ ಹೊಸದೊಂದು ಸಿನಿಮಾ ಪಥ ಸೃಷ್ಟಿಯಾದಂತೆ ಎಂದರು.

ಮತ್ತೊಬ್ಬ ನಿರ್ಮಾಪಕರಾದ ಅಜಯ್ ರಾಜ್ ಅರಸ್ ಅವರಿಗೆ ಸಿನಿಮಾ ನೋಡಿ ಸಂತೋಷವಾಗಿದೆ. ಪತ್ರಕರ್ತ ಜೋಗಿ ಅವರು ಚಿತ್ರದ ಸೀಡಿಗಳನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT