ಒಂದೆಡೆ ರಜನಿಕಾಂತ್ ಅವರ ಕೊಚಾಡಿಯನ್ ಸಿನಿಮಾ ಬೆಳ್ಳಿಪರದೆಯ ಮೇಲೆ ಮಿಂಚುತ್ತಿದ್ದರೆ, ಇನ್ನೊಂದೆಡೆ ರಜನಿಕಾಂತ್ ಹಾಗೂ ರಾಜ ಬಹದ್ದೂರ್ ಅವರ ಸ್ನೇಹ ಸಂಬಂಧದ ವಿಷಯಾಧಾರಿತ ‘ಒನ್ ವೇ’ ಚಿತ್ರ ಸೆಟ್ಟೇರುವ ಹಂತದಲ್ಲಿದೆ. ಇದೇ ಸಿನಿಮಾ ತಮಿಳಿನಲ್ಲಿ ‘ಒರು ವಾಜಿ ಸಾಲಾಯ್’ ಎಂಬ ಹೆಸರಿನಲ್ಲೂ ಬಿಡುಗಡೆಯಾಗುವ ನಿರೀಕ್ಷೆಯಿದೆ.
‘ರಂಗಭೂಮಿಯಲ್ಲಿ ನಿರತರಾಗಿದ್ದ ಕಾಲದಿಂದ ನನ್ನ ಹಾಗೂ ರಜನಿಕಾಂತ್ ಅವರ ಸ್ನೇಹದ ಕುರಿತಾಗಿರುವ ಚಿತ್ರಕಥೆಯೇ ಒನ್ವೇ. ಅನೇಕ ವರ್ಷಗಳು ಕಳೆದರೂ ಈ ಸ್ನೇಹ ಸಂಬಂಧ ಹೇಗೆ ಗಟ್ಟಿಯಾಗಿ ಉಳಿದಿದೆ ಎಂಬುದು ಕಥೆಯ ಜೀವಾಳ. ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಯಾವುದೇ ರೀತಿಯಲ್ಲಿ ರಜನಿ ಅವರ ಹೆಸರನ್ನು ಉಲ್ಲೇಖಿಸದೆ, ಅವರ ಚಿತ್ರ ಬಳಸದೆ ಸಿನಿಮಾ ನಿರ್ಮಿಸಬೇಕು ಎಂಬ ಆಶಯವಿತ್ತು. ಆದರೆ ಅದು ಸಾಧ್ಯವಿಲ್ಲದಂತಾಗಿದೆ. ಅವರ ಜನಪ್ರಿಯತೆಯಿಂದ ಲಾಭ ಪಡೆಯುವುದಕ್ಕಾಗಿ ಮಾಡುತ್ತಿರುವ ಸಿನಿಮಾ ಇದಲ್ಲ’ ಎನ್ನುತ್ತಾರೆ ರಾಜ್.
ರಾಜ ಬಹದ್ದೂರ್ ಅವರೇ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದು ‘ರಜನಿ ಪಾತ್ರವನ್ನು ಅಭಿನಯಿಸುವ ಕಲಾವಿದ ಯಾರು ಎಂಬುದನ್ನು ರಹಸ್ಯವಾಗಿಯೇ ಇಡಲು ಬಯಸುತ್ತೇವೆ. ಚಿತ್ರಮಂದಿರಕ್ಕೇ ಬಂದು ರಜನಿ ಪಾತ್ರಧಾರಿಯನ್ನು ಅಭಿಮಾನಿಗಳು ನೋಡಬಹುದು’ ಎಂದಿದ್ದಾರೆ ಅವರು.
ಸದ್ಯದಲ್ಲೇ ಬಿಡುಗಡೆಗೊಳ್ಳಲಿರುವ ಈ ಸಿನಿಮಾವನ್ನು ಋಷಿ ನಿರ್ದೇಶಿಸಿದ್ದಾರೆ. ‘ರಜನಿಕಾಂತ್ ಕೂಡ ಈ ಸಿನಿಮಾ ನೋಡಲು ಕಾತುರರಾಗಿದ್ದು, ಒಟ್ಟಿಗೆ ಕುಳಿತು ಚಿತ್ರ ವೀಕ್ಷಿಸುವ ಇಚ್ಛೆ ಹೊಂದಿದ್ದಾರೆ. ‘ಅವರ ಒಪ್ಪಿಗೆ ಪಡೆಯಲು ನಾನು ಕರೆ ಮಾಡಿದಾಗ ಖುಷಿಯಿಂದ ಸಮ್ಮತಿ ಸೂಚಿಸಿದ್ದಲ್ಲದೆ ಸಿನಿಮಾ ಬಿಡುಗಡೆಗೊಳ್ಳುವ ದಿನ ಒಟ್ಟಿಗೆ ಕುಳಿತು ಚಿತ್ರ ವೀಕ್ಷಿಸುವ’ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ’ ಎಂದು ರಾಜ್ ಖುಷಿಯಿಂದ ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.