ADVERTISEMENT

‘ನಿಗೂಢ ರಾತ್ರಿ’ಯ ಮದುವೆ!

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 19:30 IST
Last Updated 4 ಜನವರಿ 2018, 19:30 IST
‘ನಿಗೂಢ ರಾತ್ರಿ’ಯ ಮದುವೆ!
‘ನಿಗೂಢ ರಾತ್ರಿ’ಯ ಮದುವೆ!   

‌ಮದುವೆ ಎಲ್ಲರ ಬದುಕಿನ ಬಹುದೊಡ್ಡ ಕನಸು. ಬದುಕು ಒಂದು ಮಗ್ಗುಲಿನಿಂದ ಇನ್ನೊಂದು ಮಗ್ಗುಲಿಗೆ ಹೊರಳುವ ಹೊತ್ತದು. ಮದುವೆ ಅಂದ್ರೆ ಮನೆ ತುಂಬ ಸಂಭ್ರಮ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ನಿಗೂಢ ರಾತ್ರಿ’ ಧಾರಾವಾಹಿಯ ರಘುರಾಂ ಬಹಳ ದಿನಗಳಿಂದ ಮದುವೆ ಕನಸಿನಲ್ಲಿದ್ದ. ಈಗ ಅವನ ಕನಸು ನನಸಾಗುವ ಹೊತ್ತು. ದೇವಿಕಾ ಜೊತೆ ಸಪ್ತಪದಿ ತುಳಿಯುವ ಕ್ಷಣ ಹತ್ತಿರವಾಗಿದೆ. ಅದಕ್ಕೆ ಮುಹೂರ್ತವೂ ನಿಗದಿಯಾಗಿದ್ದು, ಇದೇ 8 ಹಾಗೂ 9 ರಂದು ನಡೆಯಲಿದೆ.

ಧಾರಾವಾಹಿಗಳು ಮದುವೆಯ ಸುಮಧುರ ಬಂಧನದಿಂದ ಹೊರತಲ್ಲ. ಜೀ ಕನ್ನಡ ದಶಕಗಳಿಂದ ಅತ್ಯುತ್ತಮ ಕಾರ್ಯಕ್ರಮ ನೀಡುತ್ತಿದೆ. ಇದೀಗ ಹಾರರ್ ಧಾರಾವಾಹಿ ‘ನಿಗೂಢ ರಾತ್ರಿ’ಯಲ್ಲಿ ಮದುವೆ ಸಂಭ್ರಮಕ್ಕೆ ಸಜ್ಜಾಗಿದೆ. ರಘುರಾಂ ಮದುವೆ ಒಂಥರ ನಿಗೂಢವಾಗಿಯೇ ಇದೆ. ಅವನ ನಿಶ್ಚಿತಾರ್ಥದ ವೇಳೆ ಮನೆಯ ಹಿರಿಯ ವ್ಯಕ್ತಿ ಸೂರ್ಯನಾರಾಯಣ ಅವರ ಅನಿರೀಕ್ಷಿತ ಸಾವು ಸಂಭವಿಸಿತ್ತು. ಇದರಿಂದ ನಿಶ್ಚಿತಾರ್ಥ ನಿಂತಿತ್ತು. ಬಳಿಕ ಮನೆಯಲ್ಲಿ ಹಲವು ನಿಗೂಢ ಘಟನೆ ನಡೆದವು. ಎಲ್ಲ ಅಡೆತಡೆ ನಡುವೆಯೂ ರಘುರಾಂ ಮದುವೆ ತಯಾರಿ ನಡೆದಿತ್ತು.

ನಿಗೂಢತೆ, ಭಯದಲ್ಲಿದ್ದ ಈ ಮನೆಯಲ್ಲಿ ಈಗ ಮದುವೆಯ ಖುಷಿ. ಮನೆಯವರ ಮನವೊಲಿಸಿ ದೇವಿಕಾಳನ್ನು ವಿವಾಹವಾಗಲು ರಘುರಾಂ ಅಣಿಯಾಗಿದ್ದಾನೆ. ಮದುವೆ ಅಷ್ಟು ಸುಲಭವಾಗಿ ಮುಗಿದು ಹೋಗುತ್ತದೆಯೇ? ಎಂಬ ಪ್ರಶ್ನೆ ಕಾಡುತ್ತದೆ. ಮದುವೆಯಲ್ಲೊಂದು ನಿಗೂಢ ಸಾವು. ಈ ಸಾವಿನಿಂದ ಕಥೆಯಲ್ಲೊಂದು ಹೊಸ ತಿರುವು. ಮತ್ತಷ್ಟು ಕುತೂಹಲ. ಮನೆಯಲ್ಲಿನ ಭಯ ದುಪ್ಪಟ್ಟಾಗುತ್ತದೆಯಂತೆ.

ADVERTISEMENT

ಹಾಸ್ಯಭರಿತ ಧಾರಾವಾಹಿಗಳನ್ನು ನಿರ್ದೇಶಿಸುತ್ತಿದ್ದ ಮಾಸ್ಟರ್ ಆನಂದ್ ‘ನಿಗೂಢ ರಾತ್ರಿ’ ಮೂಲಕ ಮೈಜುಂ ಎನ್ನಿಸುವಂತಹ ಹಾರರ್ ಧಾರಾವಾಹಿ ಕೈಗೆತ್ತಿಕೊಂಡರು. ಇದು ಧಾರಾವಾಹಿಗಳ ಸಿದ್ಧಸೂತ್ರವಾದ ಅತ್ತೆ, ಸೊಸೆಯ ಪರಿಧಿಯಿಂದ ದೂರ ಉಳಿದು ಪ್ರೇಕ್ಷಕರ ಮನ ಗೆದ್ದಿದೆ. ತೀರ್ಥಹಳ್ಳಿಯ ಸುತ್ತಮುತ್ತ ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿದೆ. ರಘುರಾಂ ಮತ್ತು ದೇವಿಕಾ ಮದುವೆ ಸಂಭ್ರಮ ಇದೇ 8ರಂದು ರಾತ್ರಿ 10.30ಕ್ಕೆ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.