ನವದೆಹಲಿ: ಹಲವಾರು ಅಡೆ ತಡೆಗಳನ್ನು ಎದುರಿಸಿದ ನಂತರ ಸಂಜಯ್ ಲೀಲಾ ಬನ್ಸಾಲಿ ಅವರ ವಿವಾದಿತ ಚಿತ್ರ ಪದ್ಮಾವತ್ ಜನವರಿ 25ರಂದು ತೆರೆ ಕಾಣಲಿದೆ ಎಂದು ವಯಾಕಾಮ್18 ಮೋಷನ್ ಪಿಕ್ಚರ್ಸ್ ಮೂಲಗಳು ತಿಳಿಸಿವೆ.
ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ರಾಜಸ್ತಾನದ ಕೆಲ ಸಂಘಟನೆಗಳು ಆರೋಪಿಸಿದ ಕಾರಣ ವಿವಾದ ಸೃಷ್ಟಿಯಾಗಿತ್ತು. ಚಿತ್ರದ ಕತೆಯು ರಜಪೂತ ರಾಣಿ ಪದ್ಮಾವತಿ ಹಾಗೂ ದೆಹಲಿ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ ಸುತ್ತ ಸುತ್ತುತ್ತದೆ. ಈ ಚಿತ್ರದ ಪ್ರದರ್ಶನವನ್ನು ನಿಷೇಧಿಸುವಂತೆ ಒತ್ತಾಯಿಸಿ ಗುಜರಾತ್, ಮಹಾರಾಷ್ಟ್ರ, ಬಿಹಾರ, ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು.
ವಿವಾದ ಬಿಸಿ ಏರುತ್ತಿದ್ದಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ– ಸೆನ್ಸಾರ್ ಮಂಡಳಿ)ಡಿ.28ರಂದು ಪರಿಶೀಲನಾ ಸಮಿತಿಯು ಸಭೆ ಸೇರಿತ್ತು. ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡುವ ಬಗ್ಗೆ ಅಂದು ನಿರ್ಧಾರ ಕೈಗೊಳ್ಳಲಾಗಿತ್ತು. ಇದಕ್ಕೂ ಮೊದಲು, ಬನ್ಸಾಲಿ ಅವರು ಸಂಸದೀಯ ಸಮಿತಿಯ ಮುಂದೆ ಹಾಜರಾಗಿದ್ದರು. 16ನೇ ಶತಮಾನದಲ್ಲಿ ಮಲಿಕ್ ಮೊಹಮ್ಮದ್ ಜಯಸಿ ಅವರು ರಚಿಸಿದ್ದ ‘ಪದ್ಮಾವತ್’ ಮಹಾಕಾವ್ಯ ಆಧರಿಸಿ ಈ ಚಲನಚಿತ್ರವನ್ನು ತಯಾರಿಸಲಾಗಿದೆ ಎಂದು ಹೇಳಿದ್ದರು. ಪರಿಶೀಲನಾ ಸಭೆಯಲ್ಲಿ ಚಿತ್ರದ ಹೆಸರನ್ನು ‘ಪದ್ಮಾವತ್’ ಎಂದು ಬದಲಾಯಿಸುವಂತೆ ಸೆನ್ಸಾರ್ ಮಂಡಳಿಯು ನಿರ್ದೇಶಕರಿಗೆ ಸೂಚಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.