ಚಂದನವನಕ್ಕೂ ಮತ್ತು ಎಣ್ಣೆ ಸಾಂಗ್ಗೂ ಬಿಡಿಸಲಾಗದ ನಂಟು. ಇತ್ತೀಚೆಗೆ ಸಿನಿಮಾಗಳಲ್ಲಿ ಎಣ್ಣೆ ಸಾಂಗ್ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ನಟ ವೈಜನಾಥ್ ಬಿರಾದಾರ್ ಪ್ರಧಾನ ಭೂಮಿಕೆಯಲ್ಲಿರುವ ‘90 ಹೊಡಿ ಮನೀಗ್ ನಡಿ’ ಚಿತ್ರದ ಎಣ್ಣೆ ಸಾಂಗ್ನ ಚಿತ್ರೀಕರಣ ಬೆಂಗಳೂರಿನ ಎಚ್ಎಂಟಿ ಫ್ಯಾಕ್ಟರಿ ಬಳಿ ನಡೆಯಿತು. ಅಂದಹಾಗೆ ಇದು ಬಿರಾದಾರ್ ನಟನೆಯ 500ನೇ ಸಿನಿಮಾವೂ ಹೌದು. ಇದು ಪಕ್ಕಾ ಕಮರ್ಷಿಯಲ್ ಚಿತ್ರವಾಗಿದೆ.
ಹಾಡಿಗಾಗಿ ಅದ್ದೂರಿ ಸೆಟ್ ಅಳವಡಿಸಲಾಗಿತ್ತು. ಈ ಎಣ್ಣೆ ಹಾಡಿಗೆ ಬಿರಾದಾರ್ ಜೊತೆಗೆ ನಟ ಕರಿಸುಬ್ಬು, ಪ್ರಶಾಂತ್ ಸಿದ್ಧಿ, ಆರ್.ಡಿ. ಬಾಬು ಮತ್ತು ವಿವೇಕ್ ಜಂಬಗಿ ಹೆಜ್ಜೆ ಹಾಕಿದರು. ‘ಹೇ... ಒಲವಿನ ಚೆಲುವಿನ ಕುಡುಕರೆ ಕೇಳೀ... ಈ ಕವಿತೆಯು ಸಮರ್ಪಣೆ ನಿಮಗೆ...’ ಎಂದು ಶುರುವಾಗುವ ಈ ಹಾಡಿಗೆ ಗಾಯಕ ರಾಜೇಶ್ ಕೃಷ್ಣನ್ ಧ್ವನಿಯಾಗಿದ್ದಾರೆ. ಈ ಹಾಡು ಬರೆದಿರುವುದು ವಿ. ನಾಗೇಂದ್ರಪ್ರಸಾದ್.
ಈ ಹಾಡಿನೊಂದಿಗೆ ಚಿತ್ರದ ಮುಕ್ಕಾಲು ಭಾಗದಷ್ಟು ಶೂಟಿಂಗ್ ಪೂರ್ಣಗೊಂಡಿದೆ. ಮುಂದಿನ ಹಂತದಲ್ಲಿ ಬಾಗಲಕೋಟೆಯಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಸಿದ್ಧತೆ ನಡೆಸಿದೆ.
‘ಚುಟು ಚುಟು...’ ಹಾಡಿನ ಖ್ಯಾತಿಯ ಭೂಷಣ್ ಇದಕ್ಕೆ ನೃತ್ಯ ಸಂಯೋಜಿಸಿದ್ದಾರೆ. ಕಿರಣ್ ಶಂಕರ್ ಸಂಗೀತ ಸಂಯೋಜಿಸಿದ್ದಾರೆ. ಕೃಷ್ಣ ನಾಯ್ಕರ್ ಅವರ ಛಾಯಾಗ್ರಹಣವಿದೆ. ಇದನ್ನು ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶಿಸಿದ್ದಾರೆ. ಅಮ್ಮಾ ಟಾಕೀಸ್ ಬಾಗಲಕೋಟೆ ಲಾಂಛನದಡಿ ಇದಕ್ಕೆ ಬಂಡವಾಳ ಹೂಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.