ADVERTISEMENT

ರುದ್ರಭೂಮಿಯೇ ‘ಕೊನೆಯ ನಿಲ್ದಾಣ’ವೇ?

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 8:59 IST
Last Updated 11 ಮಾರ್ಚ್ 2023, 8:59 IST
ಮಹೇಶ್‌ ದೇವು, ಪೂಜಾ ರಘುನಂದನ್‌
ಮಹೇಶ್‌ ದೇವು, ಪೂಜಾ ರಘುನಂದನ್‌   

ಚಿತ್ರದ ಮುಹೂರ್ತವೇ ರುದ್ರಭೂಮಿಯಲ್ಲಿ!. ಚಿತ್ರದ ಹೆಸರು ‘ಕೊನೆಯ ನಿಲ್ದಾಣ’. ಹೆಣ್ಣು ಅಬಲೆಯಲ್ಲ ಎಂಬುದು ಚಿತ್ರದ ಅಡಿಬರಹ. ಅಂದ ಹಾಗೆ ಇದು ನೀಲಮ್ಮ ಎಂಬ ಆದರ್ಶ ಮಹಿಳೆಯ ಕಥೆಯಂತೆ.

ಮೂರು ದಶಕಗಳಿಗೂ ಹೆಚ್ಚು ಕಾಲ ರುದ್ರಭೂಮಿಯಲ್ಲಿ ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ತೋಡಿರುವ ನೀಲಮ್ಮ ರೀಲ್‌ನಲ್ಲಿಯೂ ಅದೇ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ತಾರಾಗಣದಲ್ಲಿ ಮಹೇಶ್‌ದೇವು, ಹಾಸನದ ಪೂಜಾರಘುನಂದನ್, ಮೀಸೆ ಆಂಜನಪ್ಪ, ಬಸವರಾಜ ಮೈಸೂರು, ಉಗ್ರಂ ಸುರೇಶ್, ನಾಣಿ ಹೆಬ್ಬಾಳ್, ಆನಂದ್‌ಬಾಬು, ಮಂಜುನಾಥ್ ಆರ್. ಹಾಗೂ ರಂಗಾಯಣದ ಹೊಸ ಪ್ರತಿಭೆಗಳು ತಾರಾಗಣದಲ್ಲಿವೆ. ಪ್ರೊ.ದೊಡ್ಡರಂಗೇಗೌಡ ಮತ್ತು ಆಸ್ಟ್ರೇಲಿಯಾದ ಕೃಷ್ಣಪ್ರಸಾದ್, ಅಮೆರಿಕದ ಮಧು ಅಕ್ಕಿಹೆಬ್ಬಾಳ್ ಸಾಹಿತ್ಯ ಬರೆದಿದ್ದಾರೆ. ರಾಮ್‌ಪ್ರಸಾದ್ ಸಂಗೀತ ಸಂಯೋಜಿಸುತ್ತಿದ್ದಾರೆ. ಅಮೆರಿಕದಲ್ಲಿರುವ ಕನ್ನಡಿಗ ಹರೀಶ್‌ ಎಸ್.ಕೋಲಾರ್ ನಿರ್ಮಾಣ ಮಾಡುತ್ತಿದ್ದಾರೆ. ಹಿರಿಯ ನಟ, ನಿರ್ದೇಶಕ ಎಂ.ಡಿ.ಕೌಶಿಕ್ ಚಿತ್ರದ ನಿರ್ದೇಶಕರು. ಇದರಲ್ಲಿ ಅವರದ್ದು ಯೂಟ್ಯೂಬರ್‌ನ ಪಾತ್ರ.

ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವ ಚಿತ್ರ ಇದಾಗಿದ್ದು, ಜೀವನದ ಕೊನೆಯ ದಿನಗಳಲ್ಲಿ ಮನುಷ್ಯ ಮುಕ್ತಿಯನ್ನು ಹೊಂದುತ್ತಾನೆ. ಹುಟ್ಟು ಸಾವು ನಿರಂತರ ಪ್ರಕ್ರಿಯೆ. ಯಾರು ಶಾಶ್ವತವಾಗಿ ಇರಲಾಗುವುದಿಲ್ಲ. ಆತನು ಪ್ರಪಂಚವನ್ನಾಳುವ ದೊರೆಯಾಗಿದ್ದರೂ, ಅಥವಾ ರಸ್ತೆಯಲ್ಲಿ ಭಿಕ್ಷೆ ಬೇಡುವ ಭಿಕಾರಿಯಾಗಿದ್ದರೂ ಅಷ್ಟೇ. ಇಬ್ಬರಿಗೂ ಕಡೆಯ ನಿಲ್ದಾಣ ಸ್ಮಶಾನವೇ ಆಗಿರುತ್ತದೆ. ಜೀವನಕ್ಕೆ ಬೇಕಾದ ತತ್ವಗಳು, ವೇದಾಂತ ಸಾಧ್ಯವಾದರೆ ಬದುಕು ಏನು ಎಂಬುದನ್ನು ಆರ್ಥ ಮಾಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದಿದೆ ಚಿತ್ರತಂಡ.

ADVERTISEMENT

ರಾಮ್‌ಪ್ರಸಾದ್, ಸುಪ್ರಿಯಾ ರಘುನಂದನ್, ಸಂಹಿತಾಹರೀಶ್ ಹಾಡುಗಳಿಗೆ ಧ್ವನಿಯಾಗಲಿದ್ದಾರೆ. ಛಾಯಾಗ್ರಹಣ ಪಿ.ವಿ.ಆರ್.ಸ್ವಾಮಿ, ರಚನೆ-ಸಂಭಾಷಣೆ ಬಿ.ಶಿವಾನಂದ ಅವರದಾಗಿದೆ. ಸಂಪೂರ್ಣ ಚಿತ್ರೀಕರಣ ಸ್ಮಶಾನದಲ್ಲಿ ನಡೆಯಲಿದೆ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.