ರಂಗು ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಆ ಒಂದು ಕನಸು’ ಚಿತ್ರದ ಮುಹೂರ್ತ ರಾಜರಾಜೇಶ್ವರಿ ನಗರದ ನಿಮಿಷಾಂಭಾ ದೇವಸ್ಥಾನದಲ್ಲಿ ನೆರವೇರಿತು.
ನಿರ್ದೇಶಕ ವಿಷ್ಣು ನಾಚನೇಕರ್ ಮಾತನಾಡಿ ‘ಇಲ್ಲಿಯವರೆಗೂ ನಾನು 22 ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಹಲವು ಧಾರಾವಾಹಿಗಳಲ್ಲಿ ನಿರ್ದೇಶಕನಾಗಿ, ಸಂಚಿಕೆ ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದೇನೆ. ಇದೀಗ ಪೂರ್ಣ ಪ್ರಮಾಣದ ಸಿನಿಮಾ ನಿರ್ದೇಶನ ಮಾಡುವ ಅವಕಾಶ ಈ ಚಿತ್ರದ ಮೂಲಕ ಸಿಕ್ಕಿದೆ’ ಸಂತಸ ವ್ಯಕ್ತಪಡಿಸಿದರು.
‘ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾ, ಕಮರ್ಷಿಯಲ್ ಅಂಶಗಳನ್ನು ಇದರಲ್ಲಿ ಬೆರೆಸಲಿದ್ದೇವೆ. ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಇನ್ನುಳಿದ ಭಾಗ ಸಾಗರ ಮತ್ತು ಶಿವಮೊಗ್ಗದಲ್ಲಿ ನಡೆಯಲಿದೆ ಎಂಬ ಮಾಹಿತಿಯನ್ನೂ ಹಂಚಿಕೊಂಡರು.
ಚಿತ್ರದ ನಿರ್ಮಾಪಕ ದಿಲೀಪ್ ಬಿ.ಎಂ ಮಾತನಾಡಿ ‘ನಮ್ಮದು ಲಾಜಿಸ್ಟಿಕ್ ಬಿಸಿನೆಸ್. ಸಿನಿಮಾ ಕ್ಷೇತ್ರದಲ್ಲಿಯೂ ಆಸಕ್ತಿ ಇತ್ತು. ಆದರೆ ಅದರ ಹಿಂದಿನ ಕೆಲಸಗಳು ಹೇಗೆ ನಡೆಯುತ್ತವೆ ಎಂಬುದು ಗೊತ್ತಿರಲಿಲ್ಲ. ಈ ಚಿತ್ರದ ಮೂಲಕ ಅದನ್ನು ತಿಳಿದುಕೊಳ್ಳಲು ನಿರ್ಮಾಣಕ್ಕಿಳಿದಿದ್ದೇನೆ. ಒಳ್ಳೆ ಕಥೆ ಮತ್ತು ಒಳ್ಳೆ ತಂಡ ಸಿಕ್ಕಿದೆ’ ಎಂದರು.
ಈ ಚಿತ್ರಕ್ಕೆ ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ. ಶಿವಮೊಗ್ಗ ಮೂಲದ ಧನ್ಯಶ್ರೀ ನಾಯಕಯಾಗಿ ನಟಿಸುತ್ತಿದ್ದಾರೆ.
ತಾರಾಗಣದಲ್ಲಿ ಬಾಲ ರಾಜವಾಡಿ, ಮಾ. ಚಿರಾಯು ಚಕ್ರವರ್ತಿ, ಅಮಿತ್, ಗಿರೀಶ್ ಶಿವಣ್ಣ, ರಮೇಶ್ ಭಟ್, ಗಿರಿಜಾ ಲೋಕೇಕ್, ಕುರಿ ಬಾಂಡ್ ರಂಗ, ಹರ್ಷವರ್ಧನ್, ಶ್ವೇತಾ ರಾವ್ ಮತ್ತು ಜಯಶ್ರೀ ನಟಿಸಲಿದ್ದಾರೆ.
ಅಭಿಷೇಕ್ ಜಿ. ರಾಯ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಕಥೆ, ಚಿತ್ರಕಥೆ ಉದಯಂ, ವೀನಸ್ ಮೂರ್ತಿ ಛಾಯಾಗ್ರಹಣ, ಸುಜನ್ ಅವರ ಸಂಕಲನ, ಅಲ್ಟಿಮೇಟ್ ಶಿವು ಸಾಹಸ, ಹೈಟ್ ಮಂಜು ಮತ್ತು ಸ್ಟಾರ್ ಗಿರಿ ನೃತ್ಯ ನಿರ್ದೇಶನ, ಎಂ.ಪಿ ಲೋಕೇಶ್ ವೈ ಮಲ್ಲಾಪುರ, ರಿಷಿಕೇಶ್ ನಿರ್ಮಾಣ ನಿರ್ವಹಣೆ, ಅಮೃತ್ ಜೋಗಿ ಅವರ ಕಲಾ ನಿರ್ದೇಶನ ಮಾಡಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.