ನಟ ಅಭಿಷೇಕ್ ಬಚ್ಚನ್ ಅವರು ಎರಡು ವರ್ಷಗಳ ನಂತರ ‘ಮನ್ಮರ್ಜಿಯಾ’ ಚಿತ್ರದ ಮೂಲಕ ಬಾಲಿವುಡ್ನಲ್ಲಿ ಮತ್ತೆ ಬಣ್ಣ ಹಚ್ಚಿದ್ದಾರೆ. ‘ಅತ್ಯುತ್ತಮ ಕತೆ, ಚಿತ್ರಕತೆಯುಳ್ಳ ಚಿತ್ರಕ್ಕಾಗಿ ಇಷ್ಟು ದಿನ ಕಾಯುತ್ತಿದ್ದೆ’ ಎಂದು ಅಭಿಷೇಕ್ ಹೇಳಿಕೊಂಡಿದ್ದರು. ಈ ಚಿತ್ರ ಬಿಡುಗಡೆಯಾಗಿ ಅಭಿಷೇಕ್ ಅಭಿನಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಸಮಯದಲ್ಲಿ ತಾನು ಸದ್ಯದಲ್ಲೇ ನಿರ್ದೇಶಕರಾಗುವ ಬಗ್ಗೆ ಸೂಚನೆ ನೀಡಿದ್ದಾರೆ ಅಭಿಷೇಕ್ ಬಚ್ಚನ್.
ಈಚೆಗೆ ಕಾರ್ಯಕ್ರಮವೊಂದರಲ್ಲಿ ಅವರ ಸಿನಿಜೀವನ ಸಾಗಿ ಬಂದ ರೀತಿ ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ಪ್ರಶ್ನೆ ಕೇಳಲಾಗಿತ್ತು.
ಆ ಸಂದರ್ಭದಲ್ಲಿ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ‘ಸದ್ಯಕ್ಕೆ ಚಿತ್ರ ನಿರ್ದೇಶನ ಮಾಡುವ ಯೋಚನೆ ಇಲ್ಲ. ಆದರೆ ಭವಿಷ್ಯದಲ್ಲಿ ಅಂತಹ ಅವಕಾಶ ಸಿಕ್ಕರೆ ಕಮರ್ಷಿಯಲ್ ಮಸಾಲ ಹಿಂದಿ ಸಿನಿಮಾ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಪತ್ನಿ ಐಶ್ವರ್ಯಾ ರೈ ಬಚ್ಚನ್ ಸಿನಿಮಾ ಹಾಗೂ ನಿರ್ದೇಶನದ ಬಗೆಗಿನ ಆಸಕ್ತಿ ಬಗ್ಗೆ ಮಾತನಾಡಿದ ಅವರು ‘ನಿರ್ದೇಶಕಿಯಾಗಲು ಐಶ್ವರ್ಯಾ ಸರಿಯಾದ ವ್ಯಕ್ತಿ. ಅವರು ಸಿನಿಮಾದ ಪ್ರತಿಯೊಂದು ಅಂಶಗಳ ಬಗ್ಗೆ ಆಲೋಚನೆ ಮಾಡುತ್ತಾರೆ’ ಎಂದಿದ್ದಾರೆ.
‘ನನ್ನ ಎಲ್ಲಾ ಸಿನಿಮಾ ಬಿಡುಗಡೆಯಾಗುವಾಗಲೂ ನಾನು ನನ್ನ ಕುಟುಂಬದ ಅಭಿಪ್ರಾಯವನ್ನು ಕೇಳುತ್ತೇನೆ’ ಎಂದು ಹೇಳಿದ ಅವರು ‘ಅಮ್ಮ ಯಾವಾಗಲೂ ನನ್ನ ಅಭಿನಯವನ್ನು ಮೆಚ್ಚಿ ಹೊಗಳಿದರೆ, ಅಪ್ಪ ನನ್ನ ಮುಖ ನೋಡಿಕೊಂಡು ಇದ್ದಿದ್ದನ್ನು ಇದ್ದ ಹಾಗೆಯೇ ಹೇಳಿ ಮುಗಿಸುತ್ತಾರೆ. ಪತ್ನಿ ಐಶ್ವರ್ಯಾ ನನ್ನ ಅಭಿನಯವನ್ನು ವಿಮರ್ಶೆ ಮಾಡುತ್ತಾಳೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.