ADVERTISEMENT

ನನಗೆ ಡ್ಯಾನ್ಸ್ ಹೇಳಿಕೊಡುತ್ತಿದ್ದ ಅಪ್ಪು: ನಟಿ ರಮ್ಯಾ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 6:58 IST
Last Updated 22 ಅಕ್ಟೋಬರ್ 2022, 6:58 IST
   

ಬೆಂಗಳೂರು: ನನಗೆ ಡ್ಯಾನ್ಸ್ ಅಷ್ಟು ಚೆನ್ನಾಗಿ ಬರಲ್ಲ. ಅಪ್ಪು ಜೊತೆ ಡ್ಯಾನ್ಸ್ ಮಾಡುವಾಗಲೆಲ್ಲ ಅವರೇ ನನಗೆ ಡ್ಯಾನ್ಸ್ ಹೇಳಿಕೊಡುತ್ತಿದ್ದರು ಎಂದು ನಟಿ ರಮ್ಯಾ ಹೇಳಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಪುನೀತ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಮ್ಯಾ ಅವರೇ ಈ ಥರ ಮಾಡಿ ಡ್ಯಾನ್ಸ್ ಸುಲಭವಾಗುತ್ತೆ ಅಂತ ಹೇಳುತ್ತಿದ್ದರು. ಕೆಲವೊಮ್ಮೆ ಸ್ಟೆಪ್ಸ್ ಬರದೇ ಇದ್ದಾಗ ಅಪ್ಪು ಅವರು ಡ್ಯಾನ್ಸ್ ಮಾಸ್ಟರ್ ಬಳಿ ಹೋಗಿ, ಸ್ಟೆಪ್ ಚೇಂಜ್ ಮಾಡೋಣ ಮಾಸ್ಟರ್.. ರಮ್ಯಾ ಅವರಿಗೆ ಕಷ್ಟವಾಗುತ್ತಿದೆ ಎಂದು ಹೇಳುತ್ತಿದ್ದರು. ಅಷ್ಟರಮಟ್ಟಿಗೆ ಅವರು ನನ್ನ ಸಪೋರ್ಟಿವ್ ಸಹನಟರಾಗಿದ್ದರು ಎಂದು ರಮ್ಯಾ ಹೇಳಿದ್ದಾರೆ.

ಇವತ್ತು ನಾನು ವೇದಿಕೆ ಮೇಲೆ ನಿಂತಿರುವುದಕ್ಕೆ. ಈ ಜನ ಇಷ್ಟು ಪ್ರೀತಿ ಮತ್ತು ಅಭಿಮಾನ ತೋರಿಸುತ್ತಿರುವುದಕ್ಕೆ ಡಾ. ರಾಜಕುಮಾರ್ ಕುಟುಂಬವೇ ಕಾರಣ. ರಾಜಕುಮಾರ್ ಅವರ ಇಡೀ ಕುಟುಂಬ ಕಂಡು ನನಗೆ ಖುಷಿಯಾಗುತ್ತೆ. ಅಪ್ಪು ಅವರ ಕುಟುಂಬ, ಅವರ ಅಭಿಮಾನಿಗಳಲ್ಲಿ ಅವರು ಬದುಕಿದ್ದಾರೆ ಎಂದು ನನಗೆ ಅನಿಸುತ್ತದೆ ಎಂದು ರಮ್ಯಾ ಹೇಳಿದರು.

ADVERTISEMENT

ಕೊಲಂಬೊದಲ್ಲಿ ಪುನೀತ್ ನನ್ನನ್ನು ಕಂಡು.. : ‘ಲೋಹಿತ್’ಗುಣಗಾನ ಮಾಡಿದ ಸುಧಾ ಮೂರ್ತಿ

ನಾನು ಪುನೀತ್ ರಾಜಕುಮಾರ್ ಅವರನ್ನು ಅಪ್ಪು ಎಂದು ಕರೆಯುವುದಿಲ್ಲ. ಲೋಹಿತಾಶ್ವ ಎಂದೇ ಕರೆಯುತ್ತಿದ್ದೆ. ಆ ಹೆಸರಿನಲ್ಲೇ ಅವರು ನನಗೆ ಇಷ್ಟ ಎಂದು ಇನ್ಫೋಸಿಸ್ ಫೌಂಡೇಶನ್‌ನ ಸುಧಾ ಮೂರ್ತಿ ಹೇಳಿದ್ದಾರೆ.

ಶುಕ್ರವಾರ ನಡೆದ ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ವೇದಿಕೆ ಮೇಲೆ ಪುನೀತ್ ಅವರ ಸಜ್ಜನಿಕೆಯನ್ನು ಕೊಂಡಾಡಿದರು.

ಪುನೀತ್ ಅವರು ಬಾಲ್ಯದಲ್ಲಿ ನಟಿಸಿದ್ದ ಚಿತ್ರಗಳನ್ನು ನಾನು ನೋಡಿರುವೆ. ಭಕ್ತಪ್ರಹ್ಲಾದ, ಬೆಟ್ದದ ಹೂವು ಮುಂತಾದ ಚಿತ್ರಗಳನ್ನು ನೋಡಿರುವೆ. ಲೋಹಿತ್ ಆಗಿಯೇ ಅವರನ್ನು ನೋಡಿರುವೆ. ‘ಕಾಣದಂತೆ ಮಾಯವಾದನು ನಮ್ಮ ಶಿವ’ ಹಾಡು ಜ್ಞಾಪಕಕ್ಕೆ ಬರುತ್ತಿರುತ್ತದೆ ಎಂದು ಹೇಳಿದರು.

ವೈಯಕ್ತಿಕವಾಗಿ ಅವರ ಪರಿಚಯ ನನಗೆ ಇತ್ತು. ಒಬ್ಬ ನಟನಾಗಿ, ಒಬ್ಬ ಕನ್ನಡಿಗನಾಗಿ, ಸಜ್ಜನನಾಗಿ ಅವರು ನನಗೆ ಗೊತ್ತು. ನಾನು ಅವರನ್ನು ಭೇಟಿಯಾದಾಗಲೆಲ್ಲ.. ನಾನು ನಿಮ್ಮನ್ನು ಅಪ್ಪು ಎನ್ನುವುದಿಲ್ಲ, ಪುನೀತ್ ಎನ್ನುವುದಿಲ್ಲ.. ಲೋಹಿತ್ ಎಂದೇ ಕರೆಯುತ್ತೇನೆ ಎನ್ನುತ್ತಿದ್ದೆ. ಅದಕ್ಕೆ ಪುನೀತ್ ನಗುತ್ತಿದ್ದರು ಎಂದು ಸುಧಾ ಮೂರ್ತಿ ಹೇಳಿದ್ದಾರೆ.

ಕೊಲಂಬೋದ ವಿಮಾನನಿಲ್ದಾಣದಲ್ಲಿ ಶೂಟಿಂಗ್ ಮುಗಿಸಿಕೊಂಡು ಬರುತ್ತಿದ್ದರು. ಅಷ್ಟು ಜನರ ನಡುವೆ ಬಂದು ನಮಸ್ಕಾರ ಮಾಡಿದರು. ಅವರು ಎಲ್ಲಿ ಕಮಡರೂ ವಿನಯ, ಸಜ್ಜನಿಕೆ ಕಾಣುತ್ತಿತ್ತು. ಬಹುಶಃ ರಾಜಕುಮಾರ್ ಅವರ ಕುಟುಂಬದಲ್ಲೇ ಸಜ್ಜನಿಕೆ ಇದೆ. ನಮ್ಮ ಪೀಳಿಗೆಯೆಲ್ಲ ಪುನೀತ್ ರಾಜಕುಮಶಾರ್ ರಾಜಕುಮಾರ್ ಅವರಿಗಿಂತಲೂ ಅವರ ತಂದೆ ರಾಜಕುಮಾರ್ ಸಿನಿಮಾ ನೋಡಿ ಬೆಳೆದಿದ್ದೇವೆ. ನಾವೆಲ್ಲ ರಾಜಕುಮಾರ್ ಭಕ್ತರು ಎಂದು ಸುಧಾಮೂರ್ತಿ ಹೇಳಿದರು.

ಈ ಕಾರ್ಯಕ್ರಮದ ಶೆಡ್ಯೂಲ್‌ನಲ್ಲಿ ನನ್ನ ಹೆಸರು ಇರಲಿಲ್ಲ. ಪುನೀತ ಪರ್ವ ನೋಡಲು ಬಂದಿದ್ದೆ ಎಂದು ಅವರು ಹೇಳಿದರು.

ನಟ ಪುನೀತ್ ರಾಜ್‌ಕುಮಾರ್ ಅವರು ನಿಧನರಾಗಿ ಅ.29ಕ್ಕೆ ಒಂದು ವರ್ಷ ತುಂಬಲಿದೆ. ಅವರು ಪಾಲ್ಗೊಂಡ ಸಾಕ್ಷ್ಯಚಿತ್ರ ‘ಗಂಧದಗುಡಿ’ ಅ. 28ರಂದು ಬಿಡುಗಡೆಯಾಗಲಿದೆ. ಈ ಮಧ್ಯೆ ಅದರ ಬಿಡುಗಡೆ ಪೂರ್ವ ಕಾರ್ಯಕ್ರಮ ಶುಕ್ರವಾರ ಅರಮನೆಯಲ್ಲಿ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.