ADVERTISEMENT

ನಟ ಟಿ.ಎಸ್. ಲೋಹಿತಾಶ್ವ ಇನ್ನಿಲ್ಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ನವೆಂಬರ್ 2022, 18:36 IST
Last Updated 8 ನವೆಂಬರ್ 2022, 18:36 IST
ಟಿ.ಎಸ್. ಲೋಹಿತಾಶ್ವ
ಟಿ.ಎಸ್. ಲೋಹಿತಾಶ್ವ    

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ಲೋಹಿತಾಶ್ವ(80) ಅವರು ಮಂಗಳವಾರ ಮಧ್ಯಾಹ್ನ ಬಹುಅಂಗಾಂಗ ವೈಫಲ್ಯದಿಂದ ನಿಧನರಾದರು.

ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದ ಲೋಹಿತಾಶ್ವ ಅವರಿಗೆ ನಾಲ್ಕೈದು ತಿಂಗಳ ಹಿಂದೆ ಎರಡು ಬಾರಿ ಮೂತ್ರನಾಳದ ಸೋಂಕು ಕಾಣಿಸಿಕೊಂಡಿತ್ತು. ಈ ನಡುವೆ ಅನಾರೋಗ್ಯಕ್ಕೀಡಾದ ಅವರನ್ನು ಕುಮಾರಸ್ವಾಮಿ ಲೇಔಟ್‌ನ
ಲ್ಲಿರುವ ಸಾಗರ್‌ ಆಸ್ಪತ್ರೆಗೆ ಕಳೆದ ಅ.4ರಂದು ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲೇ ಅವರಿಗೆ ಹೃದಯಾಘಾತವೂ ಆಗಿತ್ತು. ಇದರಿಂದಾಗಿ ಮಿದುಳಿಗೂ ಹಾನಿಯಾಗಿತ್ತು. ನಂತರದಲ್ಲಿ ಅವರನ್ನು ಐಸಿಯುಗೆ ದಾಖಲಿಸಿ, ವೆಂಟಿಲೇಟರ್‌ ಅಳವಡಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು.

ಆದರೆ ದಿನ ಕಳೆದಂತೆ ಅಂಗಾಂಗಳ ವೈಫಲ್ಯದಿಂದ ಅವರ ಆರೋಗ್ಯ ಕ್ಷೀಣಿಸಿತ್ತು. ‘ಕುಮಾರಸ್ವಾಮಿ ಬಡಾವಣೆಯಲ್ಲಿರುವ ಮನೆಯಲ್ಲಿ ಬುಧವಾರ ಬೆಳಗ್ಗೆ 11ರವರೆಗೆ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ನಂತರ ತಂದೆಯ ಹುಟ್ಟೂರು ತುಮಕೂರು ಸಮೀಪದ ತೊಂಡಗೆರೆಯಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಲಿದೆ’ ಎಂದು ಅವರ ಪುತ್ರ, ನಟ ಶರತ್‌ ಲೋಹಿತಾಶ್ವ ತಿಳಿಸಿದ್ದಾರೆ.

ADVERTISEMENT

ಲೋಹಿತಾಶ್ವ ಅವರು ರಂಗಭೂಮಿ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟವರು. ಮೊದಲು ಕಲಾತ್ಮಕ ಚಿತ್ರಗಳಲ್ಲಿ ಬಣ್ಣಹಚ್ಚುತ್ತಿದ್ದ ಅವರಿಗೆ ಕಮರ್ಷಿಯಲ್‌ ಬ್ರೇಕ್‌ ನೀಡಿದ್ದು ಶಂಕರ್‌ನಾಗ್‌ ಅವರ ‘ಗೀತಾ’ ಸಿನಿಮಾ.

ನಂತರ ‘ಧರ್ಮ ದಾರಿ ತಪ್ಪಿತು’, ‘ಗಜೇಂದ್ರ’, ‘ಸಂಭವಾಮಿ ಯುಗೇಯುಗೇ’, ‘ಸಾಂಗ್ಲಿಯಾನ’ ಹೀಗೆ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೆಚ್ಚಿನ ಸಿನಿಮಾದಲ್ಲಿ ‘ಮುಖ್ಯಮಂತ್ರಿ’ ಪಾತ್ರಕ್ಕೆ ಬಣ್ಣಹಚ್ಚಿದ ಖ್ಯಾತಿ ಲೋಹಿತಾಶ್ವ ಅವರದ್ದು. ಮೈಸೂರಿನ ಮಾನಸಗಂಗೋತ್ರಿಯಲ್ಲಿ ಎಂ.ಎ ಪದವಿ ಪಡೆದು, 33 ವರ್ಷ ಇಂಗ್ಲಿಷ್‌ ಪ್ರಾಧ್ಯಾಪಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.