ADVERTISEMENT

ಸಿಂಹದ ಮರಿ ದತ್ತು ಪಡೆದ ನಟ ವಸಿಷ್ಠ ಸಿಂಹ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 5:49 IST
Last Updated 3 ಜನವರಿ 2021, 5:49 IST
ದತ್ತು ಪಡೆದ ಸಿಂಹದ ಮರಿಯೊಂದಿಗೆ ನಟ ವಸಿಷ್ಠ ಸಿಂಹ
ದತ್ತು ಪಡೆದ ಸಿಂಹದ ಮರಿಯೊಂದಿಗೆ ನಟ ವಸಿಷ್ಠ ಸಿಂಹ   

ಚಂದನವನದಲ್ಲಿ ಈಗಾಗಲೇ ಹಲವು ನಟರು ಪ್ರಾಣಿಗಳನ್ನು ದತ್ತು ಪಡೆದು ಸಾಕುವ ಕೆಲಸ ಮಾಡುತ್ತಿದ್ದಾರೆ. ದರ್ಶನ್, ಶಿವರಾಜ್‌ ಕುಮಾರ್‌, ಸೃಜನ್ ಲೋಕೇಶ್, ಚಿಕ್ಕಣ್ಣ ಸೇರಿ ಹಲವು ನಟರು ಪ್ರಾಣಿ, ಪಕ್ಷಿಗಳನ್ನು ದತ್ತು ಪಡೆದಿದ್ದಾರೆ. ಇದೀಗ ಆ ಸಾಲಿಗೆ ನಟ ವಸಿಷ್ಠ ಸಿಂಹ ಸಹ ಸೇರ್ಪಡೆಗೊಂಡಿದ್ದಾರೆ. ಆದರೆ, ಇನ್ನುಳಿದ ಕಲಾವಿದರಿಗಿಂತ ವಸಿಷ್ಠ ಭಿನ್ನ ಎನಿಸಿಕೊಂಡಿದ್ದಾರೆ.

ಹೌದು, ವರ್ಷದ ಮೊದಲ ದಿನವೇ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಎಂಟು ತಿಂಗಳ ಸಿಂಹದ ಮರಿಯನ್ನು ದತ್ತು ಪಡೆದಿದ್ದಾರೆ. ಆ ಪುಟಾಣಿ ಮರಿಗೆ ತಮ್ಮ ತಂದೆಯ ಹೆಸರಾದ ವಿಜಯ ನರಸಿಂಹ ಎಂದು ನಾಮಕರಣ ಮಾಡಿದ್ದಾರೆ. ಇದೆಲ್ಲದಕ್ಕಿಂತ ವಿಶೇಷ ಏನೆಂದರೆ, ವಸಿಷ್ಠ ದತ್ತು ಪಡೆದ ಸಿಂಹದ ಮರಿ ಹುಟ್ಟಿದ್ದು ವರನಟ. ಡಾ. ರಾಜಕುಮಾರ್ ಅವರು ಹುಟ್ಟಿದ ದಿನದಂದು!

ಸಿಂಹದ ಮರಿ ದತ್ತು ಬಗ್ಗೆ ಮಾತನಾಡುವ ವಸಿಷ್ಠ ‘2020ನೇ ವರ್ಷ ಯಾವಾಗ ಮುಗಿಯತ್ತದೋ ಎಂದುಕೊಂಡಿದ್ದೇ ಹೆಚ್ಚು. ಒಂದಿಷ್ಟು ಕಹಿಘಟನೆಗಳು, ಸಾವು–ನೋವು ಇದೇ ಆಗಿತ್ತು. ಇದೀಗ ಅದೆಲ್ಲವನ್ನು ಮರೆತು ಹೊಸ ಭರವಸೆಯೊಂದಿಗೆ ಹೊಸ ಉತ್ಸಾಹದೊಂದಿಗೆ ವರ್ಷ ಆರಂಭಿಸಬೇಕು ಎಂದು ಈ ಕೆಲಸದಿಂದ ಶುರು ಮಾಡಿದ್ದೇನೆ. ಪ್ರತಿ ವರ್ಷ ಏನಾದರೊಂದು ರೆಸಲ್ಯೂಷನ್ ಇದ್ದೇ ಇರುತ್ತದೆ. ಆ ಆರಂಭವನ್ನು ಸಿಂಹದ ಮರಿಯನ್ನು ದತ್ತು ಪಡೆದುಕೊಳ್ಳುವ ಮೂಲಕ ಆರಂಭಿಸಿದ್ದೇನೆ. ಅಪ್ಪನ ಹೆಸರಾದ ವಿಜಯ ನರಸಿಂಹ ಎಂದೇ ಮರಿಗೆ ನಾಮಕರಣ ಮಾಡಿದ್ದೇನೆ’ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

ಇದರೊಂದಿಗೆ ಹೊಸ ವರ್ಷಕ್ಕೆ ಹೊಸ ಹೊಸ ಸಿನಿಮಾಗಳ ಬಗ್ಗೆಯೂ ವಸಿಷ್ಠ ಮಾಹಿತಿ ಹಂಚಿಕೊಂಡರು. ‘ಕನ್ನಡದ ಜತೆಗೆ ಪರಭಾಷೆಯ ಪಯಣವೂ ಶುರುವಾಗಿದೆ. 2020ರಲ್ಲಿ ಕನ್ನಡದಲ್ಲಿ ನನ್ನ ಎರಡು ಸಿನಿಮಾಗಳು ಬಿಡುಗಡೆ ಆಗಿದ್ದವು. ಹಾನಿಗಳಾಗಿದ್ದರೂ, ನನಗೆ ಒಂದು ರೀತಿಯಲ್ಲಿ ಪಥ ಸಿಕ್ಕಿತು. ತೆಲುಗಿನಲ್ಲಿ ಎರಡು ಸಿನಿಮಾ ಮುಗಿಸಿದ್ದೇನೆ. ಮೂರನೇ ಸಿನಿಮಾದ ಶೂಟಿಂಗ್‌ಗೆ ಹೊರಟಿದ್ದೇನೆ. ತಮಿಳಿನಿಂದಲೂ ಸಾಕಷ್ಟು ಅವಕಾಶಗಳು ಬರುತ್ತಿವೆ. ಮಲಯಾಳಂನಲ್ಲಿಯೂ ಕಥೆಗಳನ್ನು ಕೇಳುತ್ತಿದ್ದೇನೆ. ಒಟ್ಟಿನಲ್ಲಿ ನಮ್ಮ ಕೆಲಸ ಗುರುತಿಸಿ ಬೇರೆ ಇಂಡಸ್ಟ್ರಿಯವರು ಕರೆ ಮಾಡುತ್ತಿದ್ದಾರೆ’ ಎಂದು ಖುಷಿ ಹಂಚಿಕೊಳ್ಳುತ್ತಾರೆ ಈ ನಟ.

ಇದೇ ವೇಳೆ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನದ ಉಸ್ತುವಾರಿ ಅಧಿಕಾರಿ ವನಶ್ರೀ ಅವರು ದತ್ತು ಪಡೆದ ಪ್ರಮಾಣ ಪತ್ರ ಸೇರಿ ಹಲವು ಉಡುಗೊರೆಗಳನ್ನು ವಸಿಷ್ಠ ಅವರಿಗೆ ಹಸ್ತಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.