ADVERTISEMENT

ಬಾಲಕೃಷ್ಣ ಜೊತೆಗೆ ಸೊಂಟ ಬಳುಕಿಸಲು ನಟಿಯರು ಹಿಂದೇಟು!

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 11:39 IST
Last Updated 25 ಜೂನ್ 2020, 11:39 IST
ನಂದಮೂರಿ ಬಾಲಕೃಷ್ಣ
ನಂದಮೂರಿ ಬಾಲಕೃಷ್ಣ   

ಬೊಯಪತಿ ಶ್ರೀನು ಅವರು ನಟ ನಂದಮೂರಿ ಬಾಲಕೃಷ್ಣ ಪಾಲಿಗೆ ಲಕ್ಕಿ ನಿರ್ದೇಶಕ ಎಂಬ ಮಾತು ಟಾಲಿವುಡ್‌ನಲ್ಲಿ ಜನಜನಿತ. ಈ ಇಬ್ಬರ ಕಾಂಬಿನೇಷನ್‌ನಡಿ ತೆರೆಕಂಡ ‘ಸಿಂಹ’ ಮತ್ತು ‘ಲೆಜೆಂಡ್‌’ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಿದ್ದೇ ಇದಕ್ಕೆ ಕಾರಣ. ಆದರೆ, ಕಳೆದ ವರ್ಷ ತೆರೆಕಂಡ ‘ಎನ್‌ಟಿಆರ್‌ ಕಥಾನಾಯಕುಡು’ ಮತ್ತು ‘ಎನ್‌ಟಿಆರ್‌ ಮಹಾನಾಯಕುಡು’ ಸಿನಿಮಾಗಳ ಸೋಲಿನಿಂದ ಬಾಲಯ್ಯ ದಿಕ್ಕೆಟ್ಟಿರುವುದು ದಿಟ.

ಈಗ ಅವರು ಬೊಯಪತಿ ಶ್ರೀನು ಜೊತೆಗೆ ಸೇರಿ ಹೊಸ ಚಿತ್ರದಲ್ಲಿ ನಟಿಸಲು ಅಣಿಯಾಗುತ್ತಿದ್ದಾರೆ. ಈ ಇಬ್ಬರ ಕಾಂಬಿನೇಷನ್‌ನಡಿ ನಿರ್ಮಾಣವಾಗಲಿರುವ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿರುವುದು ಸಹಜ. ಆದರೆ, ಹೊಸ ಸುದ್ದಿ ಅದಲ್ಲ. ಬಾಲಯ್ಯ ಅವರ ಜೊತೆಗೆ ಸೊಂಟ ಬಳುಕಿಸಲು ಟಾಲಿವುಡ್‌ ನಟೀಮಣಿಯರು ಸಿದ್ಧರಿಲ್ಲವಂತೆ.

ಹಿರಿಯ ನಟನೊಟ್ಟಿಗೆ ಕುಣಿಯಲು ನಟಿಯರು ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಬಾಲಯ್ಯ ಜೊತೆಗೆ ನಟಿಸುವಂತೆ ತಮನ್ನಾ ಭಾಟಿಯಾ, ಸೋನಾಕ್ಷಿ ಸಿನ್ಹಾ, ಕ್ಯಾಥರೀನ್ ಟ್ರೆಸಾ ಹಾಗೂ ಕಾಜಲ್‌ ಅಗರ್‌ವಾಲ್‌ ಅವರನ್ನು ಚಿತ್ರತಂಡ ಈ ಹಿಂದೆ ಸಂಪರ್ಕಿಸಿದ್ದು ಉಂಟು. ಆದರೆ, ಅವರು ನಟಿಸಲು ಒಪ್ಪಲಿಲ್ಲ.

ADVERTISEMENT

ಈಗ ಬೊಯಪತಿ ಶ್ರೀನು, ನಟಿ ರಾಶಿ ಖನ್ನಾ ಅವರನ್ನು ತಮ್ಮ ಸಿನಿಮಾದಲ್ಲಿ ನಟಿಸಲು ಕೋರಿದರಂತೆ. ಆಕೆ ನಯವಾಗಿಯೇ ಈ ಆಫರ್‌ ಅನ್ನು ತಿರಸ್ಕರಿಸಿದ್ದಾರೆ. ಹೀರೊಯಿನ್‌ ಸಿಗದಿರುವುದು ಬಾಲಯ್ಯ ಮತ್ತು ಚಿತ್ರತಂಡಕ್ಕೆ ತಲೆನೋವು ತಂದಿದೆ.

ಸಮಯದ ಹೊಂದಾಣಿಕೆಯೇ ರಾಶಿ ಖನ್ನಾ ಅವರು ಬಾಲಯ್ಯನ ಸಿನಿಮಾ ತಿರಸ್ಕರಿಸಲು ಕಾರಣ ಎನ್ನಲಾಗುತ್ತಿದೆ. ಹಾಗಾಗಿ, ನಿರ್ದೇಶಕರು ಬೇರೆ ನಟಿಯರ ಹುಡುಕಾಟದಲ್ಲಿ ತೊಡಗಿದ್ದಾರೆ. ನಟಿಯರಾದ ಶ್ರೀಯಾ ಶರಣ್‌ ಅಥವಾ ಅಂಜಲಿ ಅವರು ಬಾಲಯ್ಯನ ಜೊತೆಗೆ ನಡು ಬಳುಕಿಸುವ ಸಾಧ್ಯತೆಯಿದೆ ಎನ್ನುತ್ತವೆ ಟಾಲಿವುಡ್‌ ಮೂಲಗಳು.

ದ್ವಾರಕ ಕ್ರಿಯೇಷನ್‌ನಡಿ ಈ ಸಿನಿಮಾ ನಿರ್ಮಿಸಲಾಗುತ್ತಿದೆ. ಇದಕ್ಕೆ ಎಸ್.ಎಸ್. ತಮನ್‌ ಸಂಗೀತ ಸಂಯೋಜಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.