ಬೆಂಗಳೂರು: ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಕುರಿತಂತೆ ಭಾವಾನಾತ್ಮಕ ಪೋಸ್ಟ್ ಹಂಚಿಕೊಂಡಿರುವ ನಟಿ, ಮಾಜಿ ಸಂಸದೆ ರಮ್ಯಾ, ‘ನಿಮ್ಮಂತೆ ಮತ್ತೊಬ್ಬರು ಇರಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
ಮಂಗಳವಾರ ಸದಾಶಿವನಗರದಲ್ಲಿ ಅಂತಿಮ ದರ್ಶನ ಪಡೆದಿದ್ದ ರಮ್ಯಾ, ತಮ್ಮ ರಾಜಕೀಯ ಮಾರ್ಗದರ್ಶಕರಾಗಿದ್ದ ಕೃಷ್ಣ ಅವರ ಬಗ್ಗೆ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಳ್ಳುವ ಮೂಲಕ ಕಂಬನಿ ಮಿಡಿದಿದ್ದಾರೆ.
‘ಅವರು(ಎಸ್.ಎಂ.ಕೃಷ್ಣ) ಒಬ್ಬ ಸಾಮಾನ್ಯ ರಾಜಕಾರಣಿಯಾಗಿರದೇ ಸಮರ್ಥ ಗೌರವಾನ್ವಿತ ರಾಜಕಾರಣಿಯಾಗಿದ್ದರು. ಅವರು ತಮ್ಮ ವಿರೋಧಿಗಳು ಸೇರಿದಂತೆ ಯಾರ ಬಗ್ಗೆಯೂ ಕೆಟ್ಟದಾಗಿ ಮಾತಾಡಿಲ್ಲ. ದಾರ್ಶನಿಕ, ವಾಗ್ಮಿ, ಕರುಣಾಮಯಿ, ಪುಸ್ತಕ ಪ್ರೇಮಿ, ಹಾಸ್ಯ ವ್ಯಕ್ತಿತ್ವದ ನಿಮ್ಮಂತೆ ಮತ್ತೊಬ್ಬರು ಇರಲು ಸಾಧ್ಯವಿಲ್ಲ. ಧನ್ಯಾವಾದಗಳು’ ಎಂದು ಬರೆದುಕೊಂಡಿದ್ದಾರೆ.
ಮಂಗಳವಾರ (ಡಿ.10) ಸದಾಶಿವನಗರದ ಸ್ವಗೃಹದಲ್ಲಿ ಎಸ್.ಎಂ.ಕೃಷ್ಣ ಅವರು ನಿಧನ ಹೊಂದಿದ್ದರು. ಬುಧವಾರ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು.
2013ರಲ್ಲಿ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ವಿರುದ್ಧ ಸ್ಪರ್ಧಿಸಿದ್ದ ರಮ್ಯಾ, 67,611 ಮತಗಳ ಅಂತರದಿಂದ ಭರ್ಜರಿ ಗೆಲವು ಸಾಧಿಸಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕಣಕ್ಕಿಳಿದಿದ್ದ ರಮ್ಯಾ, ಸಿ.ಎಸ್.ಪುಟ್ಟರಾಜು ವಿರುದ್ಧವೇ ಸೋಲೊಪ್ಪಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.