ನಟಿ ಶ್ರದ್ಧಾ ಕಪೂರ್ ತಮ್ಮ ಮುಂದಿನ ಚಿತ್ರದಲ್ಲಿ ಇಚ್ಛಾಧಾರಿ ನಾಗಿಣಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಈ ಸಿನಿಮಾಕ್ಕೆ ನಿರ್ಮಾಪಕ ನಿಖಿಲ್ ದ್ವಿವೇದಿ ಹಣ ಹೂಡಿಕೆ ಮಾಡಲಿದ್ದಾರೆ.ಹಿಂದೆ ಬಾಲಿವುಡ್ನ ಸ್ಟಾರ್ ನಟಿಯರಾದ ಶ್ರೀದೇವಿ ಹಾಗೂ ರೇಖಾ ನಾಗಿಣಿ ಪಾತ್ರದಲ್ಲಿ ನಟಿಸಿ ಜನ ಮೆಚ್ಚುಗೆ ಪಡೆದಿದ್ದರು.
ನಾಗಿಣಿ ಕಥೆ ಹೊಂದಿರುವ ಸಿನಿಮಾಕ್ಕೆ ವಿಶಾಲ್ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರವು ಪ್ರೇಮಕಥೆಯನ್ನು ಹೊಂದಿದೆ ಎಂದಿದ್ದಾರೆ ನಿರ್ಮಾಪಕ ನಿಖಿಲ್.
ಶ್ರದ್ಧಾ ಟೈಗರ್ ಶ್ರಾಫ್ ನಟನೆಯ ‘ಬಾಗಿ 3’ ಸಿನಿಮಾದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ನಾಗಿಣಿಯಾಗಿ ತೆರೆ ಮೇಲೆ ಬರಲಿರುವ ಕುರಿತು ಉತ್ಸುಕರಾಗಿರುವ ಶ್ರದ್ಧಾ ‘ಪರದೆಯ ಮೇಲೆ ನಾಗಿಣಿಯಾಗಿ ಬರುವ ಖುಷಿ ಇದೆ. ನಾನು ಬಾಲ್ಯದಲ್ಲಿ ಶ್ರೀದೇವಿ ಅವರು ನಾಗಿಣಿ ಪಾತ್ರದಲ್ಲಿ ನಟಿಸಿದ ಚಿತ್ರವನ್ನು ನೋಡುತ್ತಾ ಬೆಳೆದಿದ್ದೆ. ಭಾರತದ ಸಾಂಪ್ರದಾಯಿಕ ಜಾನಪದ ಕಥೆ ಹೊಂದಿದ ಇಂತಹ ಪಾತ್ರಗಳಲ್ಲಿ ನಟಿಸಬೇಕು ಎಂಬ ಆಸೆ ನನಗೆ ಮೊದಲಿನಿಂದಲೂ ಇತ್ತು. ಇಂತಹ ಅಪ್ರತಿಮ ಪಾತ್ರ ಸಿಕ್ಕಿರುವುದು ಖುಷಿ ತಂದಿದೆ. ಅಲ್ಲದೇ ಪ್ರೇಕ್ಷಕರು ಯಾವಾಗಲೂ ಈ ಪಾತ್ರದ ಮೇಲೆ ಆಕರ್ಷಕರಾಗಿರುತ್ತಾರೆ’ ಎಂದು ಖುಷಿಯಿಂದ ಹೇಳಿದ್ದಾರೆ.
ಈ ಸಿನಿಮಾವನ್ನು ವಿಎಫ್ಎಕ್ಸ್ ಸೇರಿದಂತೆ ವಿವಿಧ ತಂತ್ರಜ್ಞಾನಗಳೊಂದಿಗೆ ತಯಾರಿಸಲು ನಿರ್ದೇಶಕರು ಯೋಜನೆ ರೂಪಿಸಿದ್ದಾರೆ. ಈ ಹಿಂದೆ ಶ್ರದ್ಧಾ‘ರಾಜ್’ ಹಾಗೂ ‘ಸ್ತ್ರೀ’ ಸಿನಿಮಾಗಳಲ್ಲಿ ಸೂಪರ್ ನ್ಯಾಚುರಲ್ ಶಕ್ತಿ ಇರುವ ಪಾತ್ರಗಳಲ್ಲಿ ನಟಿಸಿದ್ದರು.
ಭಾರತೀಯ ಸಿನಿಮಾ ಹಾಗೂ ಕಿರುತೆರೆ ಕ್ಷೇತ್ರಗಳು ಇಚ್ಛಾಧಾರಿ ನಾಗಿಣಿಯನ್ನು ಹಲವು ಬಾರಿ ತೆರೆ ಮೇಲೆ ತಂದಿವೆ. ಏಕ್ತಾ ಕಪೂರ್ ನಿರ್ಮಾಣದ ‘ನಾಗಿಣ್ ಭಾಗ 5’ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.