ಮುಂಬೈ: ಕೇರಳ ಮೂಲದ ಕಿರಿಯ ಕಲಾವಿದ ಎಂ.ಎಫ್. ಕಪಿಲ್ ಅವರ ಸಾವಿನ ಪ್ರಕರಣದ ಕುರಿತು ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಅಖಿಲ ಭಾರತ ಸಿನಿಮಾ ಕಾರ್ಮಿಕರ ಸಂಘಟನೆ (ಎಐಸಿಡಬ್ಲ್ಯುಎ)ಯು ಒತ್ತಾಯಿಸಿದೆ.
ಕೊಲ್ಲೂರು ಬಳಿಯ ನಡೆಯುತ್ತಿದ್ದ ಸಿನಿಮಾ ಚಿತ್ರೀಕರಣದ ಬಿಡುವಿನ ವೇಳೆ ಕಪಿಲ್ ಅವರು ಸೌಪರ್ಣಿಕ ನದಿಯಲ್ಲಿ ಈಜಲು ಹೋಗಿ ಮುಳುಗಿ, ಮೃತಪಟ್ಟಿದ್ದರು. ಮೃತ ಕಪಿಲ್ ಅವರು, ರಿಷಬ್ ಶೆಟ್ಟಿ ನಿರ್ಮಾಪರಾಗಿರುವ ‘ಕಾಂತಾರ: ಚಾಪ್ಟರ್ 1’(ಕಾಂತಾರ ಪ್ರೀಕ್ವೆಲ್) ಚಿತ್ರದ ಭಾಗವಾಗಿದ್ದರು.
ಈ ಕುರಿತು ನಿಷ್ಪಕ್ಷಪಾತ ತನಿಖೆಗಾಗಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಈ ಸಂಬಂಧ ರಿಷಬ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಬೇಕು. ಕಪಿಲ್ ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಐಸಿಡಬ್ಲ್ಯುಎ ಮನವಿ ಮಾಡಿದೆ.
‘ಕೇರಳದ ವೈಕಮ್ನ ಮೂಸರಿಥಾರ ಗ್ರಾಮದವರಾದ ಕಿರಿಯ ಕಲಾವಿದ ಕಪಿಲ್, ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಮೇ 6ರಂದು 3.45ರ ಸುಮಾರಿಗೆ ಕರ್ನಾಟಕದ ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ’ ಎಂದು ಎಐಸಿಡಬ್ಲ್ಯುಎ ‘ಎಕ್ಸ್’ನಲ್ಲಿ ತಿಳಿಸಿದೆ.
ಅಲ್ಲದೇ ಮೃತನ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡುವಂತೆಯೂ ಒತ್ತಾಯಿಸಿದೆ.
‘ನದಿಯಲ್ಲಿ ಈಜಲು ಹೋಗಿ ಮುಳುಗಿ ಕಲಾವಿದ ಮೃತಪಟ್ಟಿದ್ದಾನೆ. ಈ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿನಿಮಾ ನಿರ್ಮಾಪಕ ಮತ್ತು ಪ್ರೊಡಕ್ಷನ್ ಹೌಸ್ ಮಾಲೀಕ ರಿಷಬ್ ಶೆಟ್ಟಿ ಹೇಳಿದ್ದಾರೆ’ ಎಂಬುದಾಗಿ ಎಐಸಿಡಬ್ಲ್ಯುಎ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.