ADVERTISEMENT

‘ರೈಮ್ಸ್‌’ ಮೂಲಕ ನಾಯಕನಾಗಿ ಅಜಿತ್‌ ಜಯರಾಜ್‌ ತೆರೆಗೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 14:13 IST
Last Updated 1 ಮಾರ್ಚ್ 2021, 14:13 IST
ರೈಮ್ಸ್‌ ಚಿತ್ರದ ಪೋಸ್ಟರ್‌ ಅನಾವರಣ
ರೈಮ್ಸ್‌ ಚಿತ್ರದ ಪೋಸ್ಟರ್‌ ಅನಾವರಣ   

ಬೆಂಗಳೂರು: ಭೂಗತದೊರೆಯಾಗಿದ್ದ ಜಯರಾಜ್ ಪುತ್ರ ಅಜಿತ್ ಜಯರಾಜ್ ಸೈಕಲಾಜಿಕಲ್‌ ಥ್ರಿಲ್ಲರ್‌ ಕಥಾಹಂದರವಿರುವ ‘ರೈಮ್ಸ್‌’ ಮೂಲಕ ನಾಯಕನಾಗಿ ತೆರೆ ಮೇಲೆ ಬರುತ್ತಿದ್ದು, ಚಿತ್ರದ ಪೋಸ್ಟರ್ ಅನಾವರಣ ರೇಣುಕಾಂಬ ಚಿತ್ರಮಂದಿರದಲ್ಲಿ ನಡೆಯಿತು.

ಅಜಿತ್‌ಕುಮಾರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಮಾಜಿ ಪೋಲೀಸ್ ಆಯುಕ್ತ ಬಿ.ಬಿ. ಅಶೋಕ್‌ಕುಮಾರ್ ಅವರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ‘ನಾವೇನೇ ಪ್ರಕರಣ ಪತ್ತೆ ಮಾಡಿದರೂ ಅದನ್ನು ಸಿನಿಮಾಗಳಲ್ಲಿ ರೋಚಕವಾಗಿ ತೋರಿಸುತ್ತಾರೆ. ನಾನು ಜಯರಾಜ್ ಜೊತೆ ತುಂಬಾ ಕಾದಾಡಿದವನು. ನಾನು ಪೋಲೀಸ್ ಇಲಾಖೆಗೆ ಬರಲು ಒಂದು ರೀತಿ ಸಿನಮಾನೇ ಕಾರಣ, ಅಮಿತಾಭ್ ಅವರ ಜಂಜೀರ್ ಸಿನಿಮಾ ನೋಡಿ ಪ್ರೇರಿತನಾಗಿದ್ದೆ. 35 ವರ್ಷ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ಯಾರು ಪೋಲೀಸರನ್ನು ದ್ವೇಷಿಸುತ್ತಿದ್ದರೋ ಅವರ ಮಗನೇ ಈಗ ಪೋಲೀಸ್ ಪಾತ್ರ ಮಾಡುತ್ತಿದ್ದಾನೆ’ ಎಂದು ತಮ್ಮ ಅನುಭವಗಳನ್ನು ಅಶೋಕ್‌ ಕುಮಾರ್‌ ಬಿಚ್ಚಿಟ್ಟರು.

ಚಿತ್ರದಲ್ಲಿ ಸರಣಿ ಕೊಲೆಗಳ ಹಿನ್ನೆಲೆಯನ್ನು ಬಯಲಿಗೆಳೆಯುವ ಪೊಲೀಸ್ ಇನ್‌ಸ್ಪೆಕ್ಟರ್‌ ಪಾತ್ರದಲ್ಲಿ ಅಜಿತ್ ಜಯರಾಜ್ ಕಾಣಿಸಿಕೊಂಡಿದ್ದಾರೆ. ‘ಆ ಎಲ್ಲಾ ಕೊಲೆಗಳ ಹಿಂದೆ ರೈಮ್ಸ್ ಇರುತ್ತದೆ. ಅದರ ಹಿನ್ನೆಲೆ ಏನೆಂಬುದು ಅಂತ್ಯದಲ್ಲಿ ತಿಳಿಯುತ್ತದೆ. ಇಲ್ಲಿ ಪತ್ರಿಕೆಯೊಂದರ ಅಪರಾಧ ವರದಿಗಾರ್ತಿಯೂ ನಾಯಕನ ತನಿಖೆಗೆ ಕೈಜೋಡಿಸುತ್ತಾರೆ. ಚಿತ್ರಕಥೆ ಬಹಳ ಇಷ್ಟವಾಯಿತು’ ಎಂದು ಅಜಿತ್‌ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.