ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ‘ಪುಷ್ಪಾ’. ಈ ಸಿನಿಮಾದ ಶೂಟಿಂಗ್ ಕೊರೊನಾ ಕಾರಣದಿಂದ ನಿಂತಿತ್ತು. ಈಗ ಶೂಟಿಂಗ್ ಪುನಾರಾಂಭಿಸಲು ಬನ್ನಿ ರೆಡಿಯಾಗಿದ್ದಾರೆ. ಆದರೆ ಕಾಡಿನ ಹಿನ್ನೆಲೆಯಲ್ಲಿ ಶೂಟಿಂಗ್ ಮಾಡಬೇಕಾಗಿದ್ದು ಹಾಗೂ ಕೋವಿಡ್ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಕಾರಣದಿಂದ ಸಿನಿಮಾ ತಂಡಕ್ಕೆ ಶೂಟಿಂಗ್ ಮುಂದುವರಿಸುವುದು ಕಷ್ಟಸಾಧ್ಯವಾಗಿದೆ.
ಮೊದಲು ಕೇರಳದ ಕಾಡಿನಲ್ಲಿ ಶೂಟಿಂಗ್ ಮಾಡುವುದು ಎಂಬ ಯೋಜನೆ ಹಾಕಿಕೊಂಡಿತ್ತು ಚಿತ್ರತಂಡ. ಆದರೆ ಕೊರೊನಾ ಕಾರಣದಿಂದ ಆಂಧ್ರಪ್ರದೇಶ ಮಾರೇಡುಮಿಲ್ಲಿಗೆ ಚಿತ್ರೀಕರಣದ ಸ್ಥಳವನ್ನು ಸ್ಥಳಾಂತರಿಸಲಾಗಿತ್ತು. ಆದರರೂ ಸಿನಿಮಾ ನಿರ್ಮಾಪಕರು ಇನ್ನೂ ಈ ವಿಷಯದಲ್ಲಿ ಗೊಂದಲದಲ್ಲಿದ್ದಾರೆ. ಸದ್ಯ ಕೇರಳದಲ್ಲಿ ಕೊರೊನಾ ನಿಯಂತ್ರಣದಲ್ಲಿರುವ ಕಾರಣದಿಂದ ಶೂಟಿಂಗ್ ಅಲ್ಲೇ ಮುಂದುವರಿಸುವುದಾ ಅಥವಾ ಮಾರೇಡುಮಿಲ್ಲಿನಲ್ಲಿ ನಡೆಸುವುದಾ? ಎಂಬ ಗೊಂದಲ ಚಿತ್ರತಂಡದ್ದು.
ಅದೇನೇ ಇದ್ದರೂ ನಿರ್ದೇಶಕ ಸುಕುಮಾರ್ ಈ ಸಮಯದಲ್ಲಿ ಶೂಟಿಂಗ್ ಪುನರಾರಂಭಗೊಳಿಸುವ ಬಗ್ಗೆ ಒಲವು ತೋರುತ್ತಿಲ್ಲ. ಅಲ್ಲದೇ ಸಿನಿಮಾಟೊಗ್ರಾಫರ್ ಮೈರೋಲಾ ಬ್ರೋಝೆಕ್ ಲಾಕ್ಡೌನ್ಗೂ ಮೊದಲು ಪೋಲೆಂಡ್ಗೆ ತೆರಳಿದ್ದರು. ಅವರು ಭಾರತಕ್ಕೆ ಬರಬೇಕಾಗಿದೆ. ಶೂಟಿಂಗ್ ಜಾಗವನ್ನು ಅಂತಿಮಗೊಳಿಸುವ ಮೊದಲು ಸಿನಿಮಾಟೊಗ್ರಾಫರ್ ಹಾಗೂ ನಿರ್ದೇಶಕರು ಆ ಜಾಗವನ್ನು ನೋಡಿ ಒಪ್ಪಿಗೆ ಸೂಚಿಸಬೇಕಿದೆ.
ಎಲ್ಲಾ ಪ್ರಕ್ರಿಯೆಗಳು ನಡೆಯಲು ತುಂಬಾ ದಿನಗಳು ಬೇಕು. ಆ ಕಾರಣಕ್ಕೆ ಪುಷ್ಪಾ ಶೂಟಿಂಗ್ ಆರಂಭವಾಗಲು ಇನ್ನೂ ಕೆಲವು ವಾರ ಅಥವಾ ತಿಂಗಳುಗಳು ಮುಂದೆ ಹೋಗಬಹುದು. ಈ ನಡುವೆ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಸಿನಿಮಾದ ಎಲ್ಲಾ ಹಾಡುಗಳ ಕಂಪೋಸಿಂಗ್ ಕೆಲಸವನ್ನು ಮುಗಿಸಿದ್ದಾರೆ ಎಂಬ ಸುದ್ದಿಯಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.