ADVERTISEMENT

‘ಕಾರ್ತಿಕೇಯ 2’ ಚಿತ್ರದಿಂದ ಅನುಪಮಾ ಪರಮೇಶ್ವರನ್‌ ಹೊರಬಂದರೇ?

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 19:30 IST
Last Updated 8 ಜೂನ್ 2020, 19:30 IST
ನಟಿ ಅನುಪಮಾ ಪರಮೇಶ್ವರನ್
ನಟಿ ಅನುಪಮಾ ಪರಮೇಶ್ವರನ್   

ಚಂದೂ ಮೊಂಡೆಟಿ ನಿರ್ದೇಶನದ ‘ಕಾರ್ತಿಕೇಯ’ ಚಿತ್ರ ತೆರೆಕಂಡಿದ್ದು 2014ರಲ್ಲಿ. ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿಭಾಗದಲ್ಲಿ ಇರುವ ಕಾರ್ತಿಕೇಯ ದೇಗುಲ ಮತ್ತು ವೈದ್ಯಕೀಯ ವಿದ್ಯಾರ್ಥಿ ಕಾರ್ತಿಕ್‌ನ ಜೀವನದ ಕಥೆಯೇ ಇದರ ತಿರುಳು. ನಿಖಿಲ್‌ ಸಿದ್ಧಾರ್ಥ್‌ ಮತ್ತು ಸ್ವಾತಿ ರೆಡ್ಡಿ ನಟಿಸಿದ್ದ ತೆಲುಗಿನ ಈ ಥ್ರಿಲ್ಲರ್‌ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲೂ ಉತ್ತಮ ಗಳಿಕೆ ಕಂಡಿತ್ತು. ಈಗ ನಿರ್ದೇಶಕ ಚಂದೂ ಮೊಂಡೆಟಿ ಇದರ ಸ್ವೀಕೆಲ್‌ಗೆ ಮುಂದಾಗಿದ್ದಾರೆ.

‘ಕಾರ್ತಿಕೇಯ 2’ ಚಿತ್ರದ ನಾಯಕಿಯಾಗಿ ಅನುಪಮಾ ಪರಮೇಶ್ವರನ್‌ ನಟಿಸಲಿದ್ದಾರೆ ಎಂದು ಈ ಹಿಂದೆ ಚಿತ್ರತಂಡವೇ ಘೋಷಿಸಿತ್ತು. ಆದರೆ, ತನ್ನ ಪಾತ್ರಕ್ಕೆ ಹೆಚ್ಚಿನ ಪ್ರಾಧಾನ್ಯ ಸಿಗದಿರುವ ಕಾರಣ ಚಿತ್ರತಂಡದಿಂದ ಆಕೆ ಹೊರನಡೆದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು. ಇದು ಚಿತ್ರತಂಡಕ್ಕೂ ಇರುಸುಮುರುಸು ತಂದಿತ್ತು.

ಕೊನೆಗೆ, ನಿರ್ದೇಶಕ ಚಂದೂ ಮೊಂಡೆಟಿ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ‘ಅನುಪಮಾ ಪರಮೇಶ್ವರ್‌ ‘ಕಾರ್ತಿಕೇಯ 2’ ನಟಿಸಲಿದ್ದಾರೆ. ಅವರು ಚಿತ್ರದಿಂದ ಹೊರ ನಡೆದಿದ್ದಾರೆ ಎಂಬುದು ಅಪ್ಪಟ ಸುಳ್ಳು. ಸರ್ಕಾರ ಅನುಮತಿ ನೀಡಿದ ಬಳಿಕ ಶೂಟಿಂಗ್‌ ಆರಂಭಿಸಲಾಗುವುದು’ ಎಂದು ತಿಳಿಸಿದ್ದಾರೆ.

ADVERTISEMENT

ಇದು ‘ಕಾರ್ತಿಕೇಯ’ ಚಿತ್ರದ ಮುಂದುವರಿದ ಭಾಗವೇ ಆಗಿದ್ದರೂ ಚಿತ್ರಕಥೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆಯಂತೆ. ಶೂಟಿಂಗ್‌ಗಾಗಿ ಹೊಸ ಸೆಟ್‌ ಹಾಕಲಾಗುತ್ತದೆ ಎಂದಿದೆ ಚಿತ್ರತಂಡ. ಅಭಿಷೇಕ್‌ ಪಿಕ್ಚರ್ಸ್‌ನಡಿ ಇದಕ್ಕೆ ಬಂಡವಾಳ ಹೂಡಲಾಗಿದೆ. ಈಗಾಗಲೇ, ಬಿಡುಗಡೆಗೊಂಡಿರುವ ಇದರ ಟೀಸರ್‌ ಸಿನಿಮಾದ ಕಥೆಯ ಮೇಲೆ ಕುತೂಹಲ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.