ADVERTISEMENT

’ನಾನೇಕೆ ಆ ಸಿನಿಮಾ ನೋಡಲಿ?’–ಅರ್ಜುನ್‌ ರೆಡ್ಡಿ ರಿಮೇಕ್‌ ನೋಡದ ವಿಜಯ್‌ ದೇವರಕೊಂಡ

ಕಬೀರ್‌ ಸಿಂಗ್‌ನಲ್ಲಿ ಶಾಹಿದ್‌

ಏಜೆನ್ಸೀಸ್
Published 14 ಜುಲೈ 2019, 12:07 IST
Last Updated 14 ಜುಲೈ 2019, 12:07 IST
   

ಅರ್ಜುನ್‌ ರೆಡ್ಡಿ ಚಿತ್ರದಿಂದಖ್ಯಾತರಾದ ವಿಜಯ್ ದೇವರಕೊಂಡ ‘ನಾನೇಕೆ ಕಬೀರ್‌ ಸಿಂಗ್ ಚಿತ್ರವನ್ನು ನೋಡಲಿ’ ಎಂದು ವ್ಯಕ್ತಪಡಿಸಿರುವ ಅಭಿಪ್ರಾಯದಿಂದ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಅರ್ಜುನ್‌ ರೆಡ್ಡಿ ಸಿನಿಮಾದ ನಿರ್ದೇಶಕ ಸಂದೀಪ್‌ ರೆಡ್ಡಿ ವಂಗ ಹಿಂದಿ ಅವತರಣಿಕೆಯನ್ನೂ ನಿರ್ದೇಶಿಸಿದ್ದಾರೆ. ತೆಲುಗಿನಲ್ಲಿ ಸೂಪರ್‌ ಹಿಟ್‌ ಆದ ಅರ್ಜುನ್‌ ರೆಡ್ಡಿ ಮೂಲಕ ವಿಜಯ್‌ ದೇವರಕೊಂಡ ತೆಲುಗು ಚಿತ್ರರಂಗದ ಹೊರಗೂ ಜನಪ್ರಿಯತೆ ಗಳಿಸಿದರು. ಮದ್ಯ ವ್ಯಸನಿಯಾದ ವೈದ್ಯಕೀಯ ವಿದ್ಯಾರ್ಥಿ ಪಾತ್ರದಲ್ಲಿನ ಅಭಿನಯದಿಂದ ಯುವ ಮನಸ್ಸುಗಳನ್ನು ಸೆಳೆದುಕೊಂಡರು. ಅದೇ ಪಾತ್ರದಲ್ಲಿ ಶಾಹಿದ್‌ ಕಪೂರ್‌ ಅಭಿನಯಿಸಿದ್ದಾರೆ.

ಈಗ ಬಾಲಿವುಡ್‌ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ‘ಕಬೀರ್‌ ಸಿಂಗ್‌’ ಅರ್ಜುನ್‌ ರೆಡ್ಡಿ ಸಿನಿಮಾದ ರಿಮೇಕ್‌. ಆ ಚಿತ್ರವನ್ನು ನೋಡಿದಿರಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ವಿಜಯ್, ‘ನಾನೇಕೆ ಆ ಸಿನಿಮಾ ನೋಡಬೇಕು? ಅದರ ಕಥೆ ತಿಳಿದಿದೆ. ಅದೇ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಶಾಹಿದ್‌ ಆ ಸಿನಿಮಾದಲ್ಲಿ ಅಭಿನಯಿಸಿದ್ದಾರೆ, ಪಾತ್ರದ ಬಗ್ಗೆ ತಿಳಿದು ನಟಿಸಿದ್ದಾರೆ. ಆದರೆ, ನಾನೇಕೆ ಮತ್ತೆ ಅದೇ ಚಿತ್ರವನ್ನು ವೀಕ್ಷಿಸಲಿ?’ ಎಂದು ಮರು ಪ್ರಶ್ನಿಸಿದ್ದಾರೆ.

ADVERTISEMENT

ವಿಜಯ್ ದೇವರಕೊಂಡ ತಮ್ಮ ಮುಂಬರುವ ಡಿಯರ್‌ ಕಾಮ್ರೆಡ್ ಚಿತ್ರದ ಕುರಿತು ಮಾಧ್ಯಮ ಸಂವಾದದಲ್ಲಿ ಕಬೀರ್‌ ಸಿಂಗ್‌ ಚಿತ್ರದ ಕುರಿತ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ‘ನಿರ್ದೇಶಕ ಸಂದೀಪ್‌ ನಮ್ಮವ. ಅವರ ಹಿಂದಿ ಸಿನಿಮಾ ಗೆಲ್ಲಲಿ ಎಂದು ಹಾರೈಸಿದ್ದೆ. ಆದರೆ, ಈಗ ಬ್ಲಾಕ್‌ ಬಸ್ಟರ್‌ ಆಗಿದೆ. ಈ ಬಗ್ಗೆ ಇನ್ನೂ ಹೆಚ್ಚು ಮಾತನಾಡಲಾರೆ’ ಎಂದಿದ್ದಾರೆ. ಹಿಂದುಸ್ತಾನ್‌ ಟೈಮ್ಸ್ ವಿಜಯ್‌ ದೇವರಕೊಂಡ ಪ್ರತಿಕ್ರಿಯೆ ಕುರಿತು ವರದಿ ಮಾಡಿದೆ.

ಕಬೀರ್‌ ಸಿಂಗ್‌ ಬಾಲಿವುಡ್‌ನಲ್ಲಿ ಈಗಾಗಲೇ ಸುಮಾರು ₹250 ಕೋಟಿಯಷ್ಟು ಬಾಕ್ಸ್‌ ಆಫೀಸ್‌ ಗಳಿಕೆ ಕಂಡಿದೆ. ಹೃತಿಕ್‌ ರೋಷನ್‌ ಅಭಿನಯದ ಸೂಪರ್‌ 30 ಈಗ ಕಬೀರ್‌ ಸಿಂಗ್‌ಗೆ ಪೈಪೋಟಿ ನೀಡುತ್ತಿದೆ. ತೆರೆಕಂಡ ಎರಡು ದಿನಗಳಲ್ಲಿ ಸೂಪರ್‌ 30 ಸಿನಿಮಾ ₹30 ಕೋಟಿ ಗಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.