
‘ಶಾಖಾಹಾರಿ’ ಸಿನಿಮಾ ಮೂಲಕ ಗಮನಸೆಳೆದ ನಿರ್ದೇಶಕ ಸಂದೀಪ್ ಸುಂಕದ್ ನಿರ್ದೇಶನದ ‘ಪಬ್ಬಾರ್’ನಲ್ಲಿ ನಟ ಅಯ್ಯಪ್ಪ ಪಿ.ಶರ್ಮ ಪೊಲೀಸ್ ಅಧಿಕಾರಿಯಾಗಿ ಬಣ್ಣಹಚ್ಚಿದ್ದಾರೆ.
ಅಯ್ಯಪ್ಪ ಅವರ ಪಾತ್ರದ ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಇದೇ ಮೊದಲ ಬಾರಿಗೆ ತಮ್ಮ ಗಡ್ಡ, ಮೀಸೆಗೆ ಕತ್ತರಿ ಹಾಕಿದ್ದಾರೆ. ಧೀರೆನ್ ಆರ್.ರಾಜ್ಕುಮಾರ್ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾವನ್ನು ಗೀತಾ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ. ಇದೊಂದು ಕ್ರೈಂ, ಅಡ್ವೆಂಚರಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಹಿಮಾಚಲ ಪ್ರದೇಶದ ಶಿಮ್ಲಾ ಬಳಿಯ ‘ಪಬ್ಬಾರ್’ ನದಿ ಈ ಚಿತ್ರದ ಕಥೆಯ ಕೇಂದ್ರಬಿಂದುವಾಗಿದೆ. ಹೀಗಾಗಿಯೇ ಚಿತ್ರಕ್ಕೆ ‘ಪಬ್ಬಾರ್’ ಎಂಬ ಶೀರ್ಷಿಕೆ ಇಡಲಾಗಿದೆ.
ಅಯ್ಯಪ್ಪ ‘ಪಬ್ಬಾರ್’ ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದಿದೆ ಚಿತ್ರತಂಡ. ಅಯ್ಯಪ್ಪ 14 ವರ್ಷದ ಬಳಿಕ ತಮ್ಮ ತಲೆಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ. ಉದ್ದ ಗಡ್ಡ ಬಿಟ್ಟು ತಮ್ಮ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರೀಗ ಸಿನಿಮಾದ ಪಾತ್ರಕ್ಕಾಗಿ ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ನಾಯಕ ಒಬ್ಬ ಪೊಲೀಸ್ ಅಧಿಕಾರಿಯಾಗಿದ್ದು, ಆತನ ಎರಡು ಪಯಣಗಳು ಕಥೆಯಲ್ಲಿದೆ.
‘ಟಗರು ಪಲ್ಯ’ ಖ್ಯಾತಿಯ ನಟಿ ಅಮೃತ ಪ್ರೇಮ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಆಯುರ್ವೇದ ಟೀಚರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶ್ವಜಿತ್ ರಾವ್ ಛಾಯಾಚಿತ್ರಗ್ರಹಣ ಹಾಗೂ ಮಯೂರ್ ಅಂಬೆಕಲ್ಲು ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ರಾಮಕೃಷ್ಣ, ಭರತ್ ಜಿ.ಬಿ, ಶ್ರೀಹರ್ಷ ಗೋಭಟ್ ತಾರಾಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.