ದುನಿಯಾ ಸೂರಿ ನಿರ್ದೇಶನದ ‘ಟಗರು’ ಚಿತ್ರದಲ್ಲಿ ‘ಡಾಲಿ’ಯಾಗಿ ಧನಂಜಯ್ ಮತ್ತು ‘ಚಿಟ್ಟೆ’ಯಾಗಿ ವಸಿಷ್ಠ ಸಿಂಹ ಅವರ ಅಭಿನಯ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಮತ್ತೆ ಈ ಜೋಡಿ ‘ಭೈರವ ಗೀತ’ ಚಿತ್ರದಲ್ಲಿ ಒಂದಾಗಿದೆ. ಅರೇ, ಧನಂಜಯ್ ಮತ್ತು ವಸಿಷ್ಠ ಸಿಂಹ ಮತ್ತೆ ಒಟ್ಟಾಗಿ ನಟಿಸಿದ್ದಾರೆಯೇ ಎಂದು ಕುತೂಹಲದ ಬಂಡಿ ಹತ್ತಬೇಡಿ.
ವಸಿಷ್ಠ ಸಿಂಹ ಅವರು ‘ಭೈರವ ಗೀತ’ ಕನ್ನಡ ಚಿತ್ರಕ್ಕೆ ಧ್ವನಿ ನೀಡಿರುವುದು ಹೊಸ ಸುದ್ದಿ. ಇದನ್ನು ಧನಂಜಯ್ ಅವರೇ ಟ್ವಿಟರ್ನಲ್ಲಿ ಹೇಳಿಕೊಂಡಿದ್ದು, ಗೆಳೆಯನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನಿರ್ದೇಶಕ ರಾಮ್ಗೋಪಾಲ್ ವರ್ಮಾ ಅವರ ಶಿಷ್ಯ ಸಿದ್ಧಾರ್ಥ್ ಈ ಚಿತ್ರ ನಿರ್ದೇಶಿಸಿದ್ದಾರೆ.
‘ಭೈರವ ಗೀತ’ ರಗಡ್, ಮಾಸ್ ಸ್ಟೋರಿ ಎಂಬುದು ಚಿತ್ರದ ಟ್ರೇಲರ್ ನೋಡಿದ ತಕ್ಷಣ ಗೊತ್ತಾಗುತ್ತದೆ. ಆದರೆ, ಇದರಲ್ಲೊಂದು ನವೀರಾದ ಪ್ರೇಮಕಥೆ ಇದೆ ಎನ್ನುವುದು ಅರಿವಾಗುತ್ತದೆ. ಈ ಸ್ಟೋರಿಯ ಪ್ರಾರಂಭ ಹಾಗೂ ಕೊನೆಯ ಭಾಗದಲ್ಲಿ ವಸಿಷ್ಠ ಸಿಂಹ ಅವರ ಧ್ವನಿ ಇರಲಿದೆಯಂತೆ.
‘ಗೆಳೆಯನ ಧ್ವನಿಯಿಂದಾಗಿ ಸಿನಿಮಾ ತೂಕ ಹೆಚ್ಚುವುದು ಗ್ಯಾರಂಟಿ. ನಾನು ಚಿಟ್ಟೆಗೆ ಆಭಾರಿಯಾಗಿದ್ದೇನೆ’ ಎಂದು ಡಾಲಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಈ ಚಿತ್ರ ನಿರ್ಮಿಸಲಾಗಿದೆ. ಇರಾ ಮೋರ್ ಈ ಚಿತ್ರದ ನಾಯಕಿ. ಬಾಲ್ರಾಜ್ ವಾಡಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೇ 7ರಂದು ರಾಜ್ಯದಾದ್ಯಂತ ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.