ADVERTISEMENT

ಶಿವಣ್ಣನ ಜನ್ಮದಿನಕ್ಕೆ ಭಜರಂಗಿ ನೋಟ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 14:34 IST
Last Updated 12 ಜೂನ್ 2020, 14:34 IST
‘ಭಜರಂಗಿ 2’ ಚಿತ್ರದ ಪೋಸ್ಟರ್‌
‘ಭಜರಂಗಿ 2’ ಚಿತ್ರದ ಪೋಸ್ಟರ್‌   
""

ನಟ ಶಿವರಾಜ್‌ಕುಮಾರ್‌ ಮತ್ತು ನಿರ್ದೇಶಕ ಎ. ಹರ್ಷ ಅವರ ಕಾಂಬಿನೇಷನ್‌ನಡಿ ನಿರ್ಮಾಣವಾಗುತ್ತಿರುವ ‘ಭಜರಂಗಿ 2’ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟುಗೊಂಡಿದೆ. ಈಗಾಗಲೇ, ಇದರ ಬಹುತೇಕ ಭಾಗದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಎಡಿಟಿಂಗ್‌ ಕೆಲಸವನ್ನೂ ಮುಗಿಸಿದ್ದು, ಡಬ್ಬಿಂಗ್‌ಗೆ ಸಿದ್ಧತೆ ನಡೆಸಿದೆ.

‘ಭಜರಂಗಿ’ ಸಿನಿಮಾದ ಕಥೆ ಮತ್ತು ಈ ಚಿತ್ರದ ಕಥೆಗೂ ಯಾವುದೇ ಸಂಬಂಧವಿಲ್ಲ. ಇದೊಂದು ವಿಭಿನ್ನವಾದ ಕಥಾಹಂದರ. ಶಿವಣ್ಣ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ಚಿತ್ರತಂಡದ ವಿವರಣೆ.

ಅಂದಹಾಗೆ ಇದರ ಸಂಪೂರ್ಣ ಚಿತ್ರೀಕರಣ ನಡೆದಿರುವುದು ಸೆಟ್‌ನಲ್ಲಿಯೇ. ಕೊರೊನಾ ಭೀತಿ ಕಾಣಿಸಿಕೊಳ್ಳದಿದ್ದರೆ ಈ ವೇಳೆಗೆ ಸಿನಿಮಾ ಥಿಯೇಟರ್‌ಗೆ ಬರಬೇಕಿತ್ತು. ಪ್ಯಾನ್‌ ಇಂಡಿಯಾ ಕಾನ್ಸೆಪ್ಟ್‌ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರ ಕುರಿತು ‘ಪ್ರಜಾ ಪ್ಲಸ್‌’ ಜೊತೆಗೆ ನಿರ್ದೇಶಕ ಹರ್ಷ ಮಾಹಿತಿ ಹಂಚಿಕೊಂಡಿದ್ದು ಹೀಗೆ: ‘ಇನ್ನೂ ಹತ್ತು ದಿನಗಳ ಶೂಟಿಂಗ್‌ ಅಷ್ಟೇ ಬಾಕಿಯಿದೆ. ದೊಡ್ಡ ಸೆಟ್‌ಗಳಲ್ಲಿನ ಚಿತ್ರೀಕರಣ ಪೂರ್ಣಗೊಂಡಿದೆ. ಸಣ್ಣ ಸೆಟ್‌ಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಕ್ಲೈಮ್ಯಾಕ್ಸ್, ಇಂಟರ್‌ವಲ್‌ ದೃಶ್ಯಗಳ ಶೂಟಿಂಗ್‌ ಅನ್ನು ಪೂರ್ಣಗೊಳಿಸಿದ್ದೇನೆ. ಶೀಘ್ರವೇ, ಡಬ್ಬಿಂಗ್‌ ಕೆಲಸ ಶುರುವಾಗಲಿದೆ’.

ADVERTISEMENT

‘‌ಚಿತ್ರದ ಆರಂಭದಿಂದಲೂ ಪ್ರೇಕ್ಷಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಕೇವಲ ಪೋಸ್ಟರ್‌ ಮಾತ್ರ ಬಿಡುಗಡೆಗೊಳಿಸಿದ್ದೇವೆ. ಹಾಗಾಗಿ, ಜುಲೈ 12ರಂದು ಶಿವರಾಜ್‌ಕುಮಾರ್‌ ಅವರ ಜನ್ಮದಿನ. ಅಂದು ‘ಲುಕ್‌ ಆಫ್‌ ದಿ ಭಜರಂಗಿ 2’ ಬಿಡುಗಡೆಗೆ ಸಿದ್ಧತೆ ನಡೆದಿದೆ. 1.45 ನಿಮಿಷದ ವಿಡಿಯೊ ಮತ್ತು ಆಡಿಯೊ ಇದಾಗಿದೆ. ಇದು ಟೀಸರ್‌ ಅಥವಾ ಟ್ರೈಲರ್‌ ಅಲ್ಲ. ‘ಭಜರಂಗಿ 2’ ಯಾವ ತರಹ ಇದೆ ಎನ್ನುವುದನ್ನು ಪ್ರೇಕ್ಷಕರ ಮುಂದಿಡಲು ನಿರ್ಧರಿಸಿದ್ದೇನೆ’ ಎಂದು ವಿವರಿಸಿದರು.

‘ಸಿನಿಮಾ ಬಿಡುಗಡೆ ಯಾವಾಗ ಎನ್ನುವುದು ಗೊತ್ತಿಲ್ಲ. ಸಿನಿಮಾದ ಈಗಿನ ಸ್ಪೀಡ್‌ ನೋಡಿದರೆ ನವೆಂಬರ್‌ ಅಥವಾ ಡಿಸೆಂಬರ್‌ ವೇಳೆಗೆ ಚಿತ್ರಮಂದಿರಕ್ಕೆ ಬರುವ ಸಾಧ್ಯತೆಯಿದೆ. ಅದು ಚಿತ್ರಮಂದಿರಗಳ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದರೆ ಮಾತ್ರ’ ಎಂದರು.

‘ಚಿತ್ರದಲ್ಲಿ ಗ್ರಾಫಿಕ್ಸ್‌ ಕೆಲಸ ಜಾಸ್ತಿಯಿದೆ. ಅದನ್ನು ಚೆನ್ನೈನಲ್ಲಿ ಮಾಡಿಸುತ್ತಿದ್ದೇನೆ. ತಮಿಳುನಾಡಿನಲ್ಲಿ ಸಿನಿಮಾ ಪೋಸ್ಟ್‌ ಪ್ರೊಡಕ್ಷನ್‌ಗೆ ಅಲ್ಲಿನ ಸರ್ಕಾರ ಅನುಮತಿ ನೀಡಿದೆ. ಆದರೆ, ನಾನು ಕೆಲಸ ವಹಿಸಿರುವ ಕಂಪನಿಯು ಇನ್ನೂ ಕೆಲಸ ಆರಂಭಿಸಿಲ್ಲ. ಎಲ್ಲಾ ಕೆಲಸವೂ ನಿಧಾನವಾಗಿ ಸಾಗುತ್ತಿದೆ. ಹಾಗಾಗಿ, ಯಾವ ತಂತ್ರಜ್ಞನ ಮೇಲೂ ಒತ್ತಡ ಹಾಕಲು ಸಾಧ್ಯವಾಗುತ್ತಿಲ್ಲ. ಥಿಯೇಟರ್‌ ಕೂಡ ಶುರುವಾಗಿಲ್ಲ. ಹಾಗಾಗಿ, ಯಾವಾಗ ಬಿಡುಗಡೆ ಮಾಡುತ್ತೇವೆ ಎಂಬುದೂ ಗೊತ್ತಿಲ್ಲ. ಒತ್ತಡ ಹಾಕುವುದಕ್ಕೂ ಕಷ್ಟವಾಗಲಿದೆ’ ಎಂದು ಹೇಳಿದರು.

ಭಾವನಾ ಮೆನನ್‌ ಈ ಚಿತ್ರದ ನಾಯಕಿ. ಸಿನಿಮಾದ ನಾಲ್ಕು ಹಾಡುಗಳಿಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಬಂಡವಾಳ ಹೂಡಿರುವುದು ಜಯಣ್ಣ–ಭೋಗೇಂದ್ರ. ಸ್ವಾಮಿ ಜಿ. ಗೌಡ ಅವರ ಛಾಯಾಗ್ರಹಣವಿದೆ. ದೀಪು ಎಸ್‌. ಕುಮಾರ್‌ ಸಂಕಲನ ನಿರ್ವಹಿಸಿದ್ದಾರೆ.

ಶಿವರಾಜ್‌ಕುಮಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.