ಶಿವಮೊಗ್ಗ: ಕ್ರಿಯಾಶೀಲ ಯುವಕರ ತಂಡ ನಿರ್ಮಿಸಿರುವ ‘ಭೂತಃಕಾಲ’ ಚಿತ್ರ ಫೆ.1ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ.
ಭೂತಃಕಾಲ ವಿಭಿನ್ನ, ಕುತೂಹಲಕಾರಿ ಚಿತ್ರ. ಗತಕಾಲದಲ್ಲಿ ನಡೆದ ಘಟನೆಯನ್ನು ವರ್ತಮಾನದಲ್ಲಿ ನಿಂತು ಹೇಳುವ ಕಥೆ ಆಧರಿಸಿದೆ. ಚಿತ್ರದಲ್ಲಿ 6 ಇಂಪಾದ ಹಾಡುಗಳಿವೆ. ಪ್ರಮೋದ್ ಸೂರ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ ಎಂದು ನಿರ್ದೇಶಕ ಸಚಿನ್ ಬಾಡಾ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಎರಡು ಹಾಡು ಹಾಡಿದ್ದಾರೆ. ಮೊದಲ ಬಾರಿ ಹಾರರ್ ಗೀತೆಗೆ ಧ್ವನಿಗೂಡಿಸಿದ್ದಾರೆ. ತ್ರೀಡಿ ತಂತ್ರಜ್ಞಾನ ಮಾದರಿಯಲ್ಲಿ ಹಾಡುಗಳು ಇವೆ. ಅನುರಾಧ ಭಟ್, ಕಪಿಲ್ ನಾಯರ್ ಡ್ಯೂಯೆಟ್ ಹಾಡಿದ್ದು ಪ್ರೇಮ, ಪ್ರಣಯದ ಸುತ್ತ ಕಥೆ ಸುತ್ತುತ್ತದೆ. ಚಿತ್ರ ರಸಿಕರಲ್ಲಿ ಆಸಕ್ತಿ ಕೆರಳಿಸಿದೆ. ಅನನ್ಯ ಭಟ್ ಕೂಡ ಒಂದು ಹಾಡಿಗೆ ದನಿಗೂಡಿಸಿದ್ದಾರೆ ಎಂದು ವಿವರ ನೀಡಿದರು.
ಹಲವು ಹಾಡುಗಳು ಯೂ ಟೂಬ್ನಲ್ಲಿ ಜನಪ್ರಿಯಗೊಂಡಿವೆ. ‘ಗುಮ್ಮ ಬರುವ’ ಹಾಡು ಜನರ ಮನಸ್ಸಿನಲ್ಲಿ ರಂಗಣಿಸುತ್ತದೆ. ಖ್ಯಾತ ನಟ-ನಟಿಯರು ಈ ಹಾಡಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದರು.
ಜಿಲ್ಲೆಯ ಹಲವೆಡೆ ಚಿತ್ರೀಕರಣ ನಡೆದಿದೆ. ಚಿತ್ರ ತಂಡದ ಹಲವು ನಟರು ಶಿವಮೊಗ್ಗದವರು. ಭದ್ರಾವತಿ ಬಳಿಯ ಗೋಂದಿ ಅಣೆಕಟ್ಟು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ ಎಂದರು.
ಚಿತ್ರದ ನಿರ್ಮಾಪಕ ಶ್ರೀಕಾಂತ್ ಮಾತನಾಡಿ, ಈ ಚಿತ್ರ ಯುವಕರ ತಂಡದ ಪ್ರಯತ್ನ. ನಾಯಕ ನಟನಾಗಿ ಆನಂದ್ ಗಣೇಶ್, ನಾಯಕಿಯಾಗಿ ರಕ್ಷಿತಾ ಬಂಗೇರಾ ನಟಿಸಿದ್ದಾರೆ. ಹರೀಶ್ ರಾವ್, ರಮೇಶ್ ನಾಯಕ್, ಟೆನಿಸ್ ಕೃಷ್ಣ, ವಿಶ್ವ, ಶ್ರೀನಿವಾಸ್ ಪ್ರಭು, ಅರುಣ್ ಹೀಗೆ ಖ್ಯಾತ ನಟ-ನಟಿಯರು ಈ ಚಿತ್ರದಲ್ಲಿದ್ದಾರೆ. ಸೆನ್ಸಾರ್ ಮಂಡಳಿ ಯುಎ ಸರ್ಟಿಫಿಕೆಟ್ ನೀಡಿದೆ ಎಂದರು.
ಬಿಜೆಪಿ ಮಾಧ್ಯಮ ಪ್ರಮುಖ ಮಧುಸೂದನ್ ಮಾತನಾಡಿ, ಈ ಚಿತ್ರ ನಮ್ಮ ಕುಟುಂಬ ನಿರ್ಮಾಣ. ಚಿತ್ರ ರಸಿಕರು ಈ ಚಿತ್ರ ಸ್ವಾಗತಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮೋದ್, ರಕ್ಷಿತ ಬಂಗೇರಾ, ಆನಂದ್ ಗಣೇಶ್, ಹರೀಶ್ ರಾವ್, ಕಿರಣ್ ಕುಮಾರ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.