‘ಅಪ್ಪು ಮಗನೆ... ನೀನಾಡೊ ಮಾತೆಲ್ಲ ಚೆಂದ.. ನಿನ್ನಿಂದ ಈ ಬಾಳೆ ಅಂದ...’ ಹೀಗೆ ಮಕ್ಕಳ ದಿನಾಚರಣೆಯಂದು ಪ್ರೀತಿಯ ತಮ್ಮ, ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರನ್ನು ನೆನೆದು ವಿಡಿಯೊವೊಂದನ್ನು ನಟ ರಾಘವೇಂದ್ರ ರಾಜ್ಕುಮಾರ್ ಟ್ವೀಟ್ ಮಾಡಿದ್ದಾರೆ.
ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ...ಹಿನ್ನೆಲೆ ಹಾಡಿನಲ್ಲಿ ವರನಟ ಡಾ.ರಾಜ್ಕುಮಾರ್ ಹಾಗೂ ಪಾರ್ವತಮ್ಮ ರಾಜ್ಕುಮಾರ್ ಅವರ ಜೊತೆಗೆ ಬಾಲ್ಯದಲ್ಲಿ ಅಪ್ಪು ಕಳೆದ ಅಪರೂಪದ ಕ್ಷಣಗಳ ಚಿತ್ರಗಳನ್ನು ಜೋಡಿಸಿ ಈ ವಿಡಿಯೊದಲ್ಲಿ ಪುನೀತ್ ಅವರನ್ನು ನೆನಪಿಸಿಕೊಂಡಿದ್ದಾರೆ ರಾಘವೇಂದ್ರ ರಾಜ್ಕುಮಾರ್. ಪ್ರತಿನಿತ್ಯವೂ ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಪುವನ್ನು ನೆನೆದು ಪೋಸ್ಟ್ ಮಾಡುತ್ತಿದ್ದಾರೆ ಅವರು. ಪುನೀತ್ ಅವರ ಅಗಲಿಕೆಯ ನೋವಿನಿಂದ ರಾಘವೇಂದ್ರ ರಾಜ್ಕುಮಾರ್ ಅವರು ಇನ್ನೂ ಹೊರಬಂದಂತೆ ಕಾಣುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಕಂಠೀರವ ಸ್ಟುಡಿಯೊದಲ್ಲಿರುವ ಪುನೀತ್ ಅವರ ಸಮಾಧಿಗೆ ದಿನವೂ ಅವರು ಭೇಟಿ ನೀಡುತ್ತಿದ್ದಾರೆ.
ಇದರ ಜೊತೆಗೆ ಮಕ್ಕಳ ದಿನಾಚರಣೆಯ ಶುಭಾಶಯ ಕೋರಿ ಪುನೀತ್ ಅವರು ಮಾಡಿದ್ದ ಹಳೆಯ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುಟಾಣಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನೇ ಪುನೀತ್ ಹೊಂದಿದ್ದರು. ಈ ವಿಡಿಯೊವನ್ನು ಅಭಿಮಾನಿಗಳು ಶೇರ್ ಮಾಡಿ ನೆಚ್ಚಿನ ನಟನನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.