ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಮತ್ತೊಂದು ಕುಡಿ ಟಾಲಿವುಡ್ ಪ್ರವೇಶಿಸಿದೆ!
ವಸ್ತ್ರ ವಿನ್ಯಾಸಕಿಯಾಗಿದ್ದ ಚಿರಂಜೀವಿ ಅವರ ಎರಡನೇ ಮಗಳು ಸುಷ್ಮಿತಾ ಅಧಿಕೃತವಾಗಿ ತೆಲುಗು ಚಿತ್ರರಂಗ ಪ್ರವೇಶಿಸಿದ್ದಾರೆ. ಆದರೆ,ನಟಿ ಅಥವಾ ನಿರ್ದೇಶಕಿಯಾಗಿ ಅಲ್ಲ, ನಿರ್ಮಾಪಕಿಯಾಗಿ!
ಈ ಮೊದಲು ಅವರು ‘ಕೈದಿ ನಂಬರ್ 150’ ಮತ್ತು ‘ಸೈರಾ ನರಸಿಂಹ ರೆಡ್ಡಿ’ ಚಿತ್ರಗಳಲ್ಲಿ ಚಿರಂಜೀವಿಗೆ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿದ್ದರು. ಇದೀಗ ಪತಿವಿಷ್ಣು ಪ್ರಸಾದ್ ಜತೆ ಸೇರಿ ‘ಗೋಲ್ಡ್ಬಾರ್ ಎಂಟರ್ಟೈನ್ಮೆಂಟ್’ ಎಂಬ ಹೊಸ ಪ್ರೊಡಕ್ಷನ್ ಹೌಸ್ ಹುಟ್ಟು ಹಾಕಿದ್ದಾರೆ.
ಖ್ಯಾತ ನಟ ಪ್ರಕಾಶ್ ರೈ ಮತ್ತು ಸಂಪತ್ ರಾಜ್ ನಟಿಸಿರುವ ವೆಬ್ ಸರಣಿ ಮೂಲಕ ಚಿತ್ರ ನಿರ್ಮಾಣ ಕ್ಷೇತ್ರಕ್ಕೆ ಕೈ ಹಾಕಿದ್ದಾರೆ. ಚಿರಂಜೀವಿ ಇಡೀ ಕುಟುಂಬ ಸುಷ್ಮಿತಾ ದಂಪತಿಯ ಹೊಸ ಪ್ರಯತ್ನಕ್ಕೆ ಬೆಂಬಲವಾಗಿ ನಿಂತಿದೆ.
ಸತ್ಯ ಘಟನೆಗಳನ್ನು ಆಧರಿಸಿ ನಿರ್ಮಿಸಲಾಗುತ್ತಿರುವ ತೆಲುಗು ವೆಬ್ ಸರಣಿಯನ್ನು ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆ ಮಾಡಲುಸುಷ್ಮಿತಾ ದಂಪತಿ ಸಿದ್ಧತೆ ನಡೆಸಿದ್ದಾರೆ.ಈಗಾಗಲೇ ಕ್ರೈಂ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕತೆಗಳನ್ನು ಅಂತಿಮಗೊಳಿಸಿದ್ದಾರೆ. ಮುಂದೆಹೋಂ ಬ್ಯಾನರ್ನಲ್ಲಿ ಚಿತ್ರ ನಿರ್ಮಾಣಕ್ಕೂ ಇಳಿಯುವ ಸುಳಿವು ನೀಡಿದ್ದಾರೆ.
‘ಆಂಧ್ರ ಪ್ರದೇಶದ ಅಪರಾಧ ಜಗತ್ತು ಮತ್ತು ರಕ್ತಸಿಕ್ತ ಅಧ್ಯಾಯಗಳನ್ನು ಈ ಸರಣಿ ಅನಾವರಣಗೊಳಿ ಸಲಿದೆ. ಆನಂದ್ ರಂಗಾ ನಿರ್ದೇಶಿಸುವ ಈ ವೆಬ್ ಸರಣಿ ಎಂಟು ಕಂತುಗಳಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಹೈದರಾಬಾದ್ನಲ್ಲಿ ಶೂಟಿಂಗ್ ಆರಂಭವಾಗಿದೆ’ ಎಂದು ಸುಷ್ಮಿತಾ ಹೇಳಿದ್ದಾರೆ.
ಈಗಾಗಲೇ ಚಿರಂಜೀವಿ ಸಹೋದರರಾದ ನಾಗೇಂದ್ರ ಬಾಬು, ಪವನ್ ಕಲ್ಯಾಣ್ ಮತ್ತು ಮಗ ರಾಮ್ಚರಣ್ ತೇಜ ಟಾಲಿವುಡ್ನಲ್ಲಿ ಮನೆಮಾತಾಗಿದ್ದಾರೆ.
ರಾಮ್ ಚರಣ್ ಆರಂಭಿಸಿದಕೊನಿಡೆಲ ಪ್ರೊಡಕ್ಷನ್ಸ್ ‘ಕೈದಿ ನಂಬರ್ 150’, ‘ಸೈರಾ ನರಸಿಂಹ ರೆಡ್ಡಿ’ ಚಿತ್ರಗಳನ್ನು ನಿರ್ಮಿಸಿದೆ. ಚಿರಂಜೀವಿ ಅವರ ಮುಂಬರುವ ಚಿತ್ರ ‘ಆಚಾರ್ಯ’ ಕೂಡ ಹೋಂ ಬ್ಯಾನರ್ನಲ್ಲಿಯೇ ಹೊರಬರಲಿದೆ. ಮಲಯಾಳಂ ಯಶಸ್ವಿ ಚಿತ್ರ ‘ಲೂಸಿಫರ್’ತೆಲುಗು ರಿಮೇಕ್ ಹಕ್ಕುಗಳನ್ನು ರಾಮ್ ಚರಣ್ ಪಡೆದಿದ್ದಾರೆ.ಕೊನಿಡೆಲ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಚಿರಂಜೀವಿ ನಟಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.