ರಾಮನಗರ: ಹೃದಯಾಘಾತದಿಂದ ನಿಧನರಾದ ನಟ ಚಿರಂಜೀವಿ ಸರ್ಜಾರ ಅಂತ್ಯಕ್ರಿಯೆಗೆ ಬೆಂಗಳೂರು ಹೊರವಲಯದ ನೆಲಗುಳಿ ಬಳಿ ಇರುವ ಫಾರ್ಮ್ ಹೌಸ್ ನಲ್ಲಿ ಸಿದ್ಧತೆ ನಡೆದಿದೆ.
ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಇರುವ ಫಾರ್ಮ್ ಹೌಸ್ ನ ಮಧ್ಯೆ ಶವವನ್ನು ಸಂಸ್ಕಾರ ಮಾಡಲಾಗುತ್ತದೆ. ಮಧ್ಯಾಹ್ನ 1 ಗಂಟೆಗೆ ಶವ ಇಲ್ಲಿಗೆ ಬರಲಿದ್ದು, 4 ಗಂಟೆ ಸುಮಾರಿಗೆ ಅಂತಿಮ ಸಂಸ್ಕಾರ ನೆರವೇರುವ ಸಾಧ್ಯತೆ ಇದೆ. ಈಗಾಗಲೇ ಸುತ್ತಮುತ್ತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಂತ್ಯಕ್ರಿಯೆಯಲ್ಲಿ ಕುಟುಂಬದವರು, ಆಪ್ತರು ಮಾತ್ರ ಪಾಲ್ಗೊಳ್ಳಲಿದ್ದಾರೆ.
ಫಾರ್ಮ್ ಹೌಸ್ ಗೆ ಬೃಂದಾವನ ಎಂದು ಹೆಸರಿಡಲಾಗಿದೆ. ಇದು ಚಿರು ಅವರ ನೆಚ್ಚಿನ ಫಾರ್ಮ್ ಹೌಸ್ ಆಗಿದ್ದು, ಮೂರು ವರ್ಷದ ಹಿಂದೆ ಅವರ ಸಹೋದರ ಧ್ರುವ ಸರ್ಜಾ ಇದನ್ನು ಖರೀದಿ ಮಾಡಿದ್ದರು.
ಧ್ರುವ ಸರ್ಜಾ ಅವರು ನನ್ನ ಒಡಹುಟ್ಟಿದ ಅಣ್ಣನ ನೆನಪು ನನ್ನೊಂದಿಗೆ ಶಾಶ್ವತವಾಗಿರಬೇಕು. ಹಾಗಾಗಿ ಅವನ ಅಂತ್ಯಕ್ರಿಯೆ ನನ್ನ ಫಾರ್ಮ್ಹೌಸ್ನಲ್ಲೇ ನಡೆಯಲಿ ಎಂದು ಭಾವುಕರಾದ ಕಾರಣಕ್ಕೂ ಕುಟುಂಬದ ಸದಸ್ಯರು ತಮ್ಮ ಮೂಲ ಗ್ರಾಮ ಮಧುಗಿರಿಯ ಜಕ್ಕೇನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸುವ ತೀರ್ಮಾನ ಕೈಬಿಟ್ಟರು ಎನ್ನುವ ಮಾತನ್ನೂ ಹೇಳಿವೆ ಕುಟುಂಬದ ಆಪ್ತ ಮೂಲಗಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.