ADVERTISEMENT

ಮುಕ್ಕಾಲು ಶೂಟಿಂಗ್ ಸ್ಮಶಾನದಲ್ಲೇ!

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 19:30 IST
Last Updated 14 ಫೆಬ್ರುವರಿ 2020, 19:30 IST
ಪೂಜಾ
ಪೂಜಾ   

‘ವೈಕುಂಠವನ್ನು ನೋಡಬೇಕು ಎಂಬ ಆಸೆ ಎಲ್ಲರಲ್ಲೂ ಇರುತ್ತದೆ. ಅದೇ ಆಸೆ ನಾನು ನಿರ್ದೇಶಿಸುತ್ತಿರುವ ಸಿನಿಮಾದ ಪಾತ್ರಗಳಿಗೂ ಇದೆ. ಹಾಗಾಗಿಯೇ ನಾನು ಈ ಸಿನಿಮಾಕ್ಕೆ ದಾರಿ ಯಾವುದಯ್ಯಾ ವೈಕುಂಠಕೆ ಎಂಬ ಶೀರ್ಷಿಕೆ ಇಟ್ಟಿದ್ದೇನೆ...’

–ಹೀಗೆ ಹೇಳಿ ತಮ್ಮ ಹೊಸ ಸಿನಿಮಾ ಬಗ್ಗೆ ಒಂದಿಷ್ಟು ಕುತೂಹಲ ಮೂಡುವಂತೆ ಮಾಡಿದರು ನಿರ್ದೇಶಕ ಸಿದ್ದು ಪೂರ್ಣಚಂದ್ರ. ಅವರು ತಮ್ಮ ಚಿತ್ರದ ಮುಹೂರ್ತ ಕಾರ್ಯಕ್ರಮ ಪೂರ್ಣಗೊಳಿಸಿ, ಪತ್ರಿಕಾಗೋಷ್ಠಿಯಲ್ಲಿ ಮೈಕ್ ಹಿಡಿದು ಕುಳಿತಿದ್ದರು.

ಹಾರರ್, ಥ್ರಿಲ್ಲರ್, ಸಸ್ಪೆನ್ಸ್‌, ಕಾಮಿಡಿ... ಹೀಗೆ ಯಾವುದೇ ಪ್ರಕಾರದ ಚೌಕಟ್ಟಿನ ವ್ಯಾಪ್ತಿಗೆ ಬರುವ ಸಿನಿಮಾ ಇದಲ್ಲ ಎನ್ನುವ ಸ್ಪಷ್ಟನೆಯನ್ನು ಸಿನಿಮಾ ತಂಡ ನೀಡಿದೆ. ‘ಈ ಚಿತ್ರದ ಶೇಕಡ 80ರಷ್ಟು ಭಾಗದ ಚಿತ್ರೀಕರಣ ನಡೆಯುವುದು ಸ್ಮಶಾನದಲ್ಲಿ. ಹೀಗಿದ್ದರೂ ಈ ಚಿತ್ರವು ವೀಕ್ಷಕರಿಗೆ ಬೋರು ಹೊಡೆಸುವುದಿಲ್ಲ. ಚಿತ್ರವು ವೀಕ್ಷಕರಿಗೆ ವೈಕುಂಠದ ದರ್ಶನ ಮಾಡಿಸುವುದು ಖಂಡಿತ’ ಎನ್ನುವ ಭರವಸೆಯನ್ನೂ ನೀಡಿದರು.

ADVERTISEMENT

‘ತಿಥಿ’ ಚಿತ್ರದ ಪೊಜಾ ಅವರು ಇದರಲ್ಲಿ ಮುಖ್ಯ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ‘ನನ್ನ ಪಾತ್ರವು ಸ್ಮಶಾನದಲ್ಲಿ ಪ್ರತಿದಿನವೂ ಹೆಣಗಳನ್ನು ನೋಡುತ್ತಿರುತ್ತದೆ. ಹೀಗಿದ್ದರೂ ಆ ಪಾತ್ರವು ಪ್ರೀತಿಯನ್ನು ಬಹಳ ಗೌರವದಿಂದ ಕಾಣುತ್ತದೆ’ ಎಂದು ತಮ್ಮ ಪಾತ್ರದ ಅಸ್ಪಷ್ಟ ಚಿತ್ರಣವೊಂದನ್ನು ನೀಡಿದರು ಪೂಜಾ. ಇವರ ಈ ಹಿಂದಿನ ಎಲ್ಲ ಚಿತ್ರಗಳಿಗಿಂತಲೂ ಭಿನ್ನವಾದ, ವಿಶೇಷವಾದ ಪಾತ್ರ ಈ ಚಿತ್ರದಲ್ಲಿ ಇದೆಯಂತೆ.

ವರ್ಧನ್ ಅವರು ಚಿತ್ರದ ನಾಯಕ ನಟ. ‘ಹಫ್ತಾ ಚಿತ್ರದಲ್ಲಿ ನಟಿಸಿದ ನಂತರ ನಾನು ಹಲವು ಕಥೆಗಳಿಗೆ ಕಿವಿಗೊಟ್ಟೆ. ಆದರೆ ಅವ್ಯಾವುದನ್ನೂ ಒಪ್ಪಿಕೊಳ್ಳಲಿಲ್ಲ. ಈ ಚಿತ್ರದಲ್ಲಿ ನಟಿಸಲು ಒಪ್ಪಿದೆ. ಇದು ಒಬ್ಬ ಕ್ರಿಮಿನಲ್‌ನ ಕಥೆ’ ಎಂದರು ವರ್ಧನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.