‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಬೆಳಿಗ್ಗೆಯೇ ‘ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್. ಮಧ್ಯಾಹ್ನ ಫೇಸ್ಬುಕ್ ಲೈವ್ ಬರ್ತೀನಿ. ಬಂದಾಗ ಎಲ್ಲಾನು ತಿಳಿಸುತ್ತೇನೆ...’ ಎಂದು ಪೋಸ್ಟ್ ಹಾಕಿದ್ದರು.
ಈ ಪೋಸ್ಟ್ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಸಂಚಲನ ಸೃಷ್ಟಿಸಿತ್ತು. ಅಭಿಮಾನಿಗಳಲ್ಲೂ ಕುತೂಹಲ ಹೆಚ್ಚಿಸಿತ್ತು. ಇನ್ನೊಂದೆಡೆ ಸ್ಟಾರ್ಗಳ ನಡುವೆ ವಾಕ್ಸಮರ ನಡೆಯಲಿದೆ ಎಂದು ಲೆಕ್ಕಾಚಾರದಲ್ಲಿ ಮುಳುಗಿದವರೇ ಹೆಚ್ಚು.
ಆದರೆ, ಮಧ್ಯಾಹ್ನ 1ಗಂಟೆಗೆ ದರ್ಶನ್ ಲೈವ್ಗೆ ಬಂದಾಗ ನಡೆದಿದ್ದೇ ಬೇರೆ. ದರ್ಶನ್ ಅಭಿಮಾನಿಗಳಿಗೆ ಚಾಲೆಂಜ್ ಹಾಕಿದ್ದಾರೆ. 1.12 ನಿಮಿಷದ ವಿಡಿಯೊದಲ್ಲಿ ಅವರು ತಮ್ಮ ಅಭಿಮಾನಿಗಳಿಗೆ ಹೇಳಿದ್ದು ಏನು ಎಂಬುದು ಇಲ್ಲಿದೆ.
‘ಎಲ್ಲರಿಗೂ ನಮಸ್ಕಾರ. ಎಲ್ರೂ ತುಂಬಾ ಕಾತುರದಿಂದ ಕಾಯ್ತಾ ಇದ್ದೀರಾ. ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಚಾಲೆಂಜ್ ಏನು? ದರ್ಶನ್ ಏನ್ ಚಾಲೆಂಜ್ ಹಾಕ್ತಾನೆ ಅಂತ. ನೀವೆಲ್ಲಾ ನನ್ನ ಸೆಲೆಬ್ರಿಟಿ ಅಂತೀರಾ. ಆದ್ರೆ ನನಗೆ ನನ್ನ ಫ್ಯಾನ್ಸೇ ದೊಡ್ಡ ಸೆಲೆಬ್ರಿಟಿಗಳಿದ್ದಂಗೆ. ಅವರೇ ಸೆಲೆಬ್ರಿಟಿಗಳು ನನಗೆ’.
ಆದ್ದರಿಂದ ಈಗ ‘ಮುನಿರತ್ನ ಕುರುಕ್ಷೇತ್ರ’ ಚಿತ್ರ ಬರುತ್ತಿದೆ. ಅದರಲ್ಲಿ ಹಲವರು ಕೆಲಸ ಮಾಡಿದ್ದಾರೆ. ಅಪ್ಪಾಜಿ ಆಗಿರಬಹುದು (ಅಂಬರೀಷ್), ರವಿ ಸರ್, ಅರ್ಜುನ್ ಸರ್, ಶ್ರೀನಿವಾಸಮೂರ್ತಿ ಅವರು, ಆಮೇಲೆ ನಿಖಿಲ್ ಆಗಿರಬಹುದು. ತುಂಬಾ ಜನರು ಕೆಲಸ ಮಾಡಿದ್ದಾರೆ. ಎಲ್ಲರೂ ಇದ್ದಾರೆ. ನೀವು ನನಗೆ ಹೆಂಗೆ ಮರ್ಯಾದೆ ಕೊಡುತ್ತೀರೋ ಆ ಸಿನಿಮಾದಲ್ಲಿನ ಪ್ರತಿಯೊಬ್ಬರಿಗೂ ಅದೇ ರೀತಿ ಮರ್ಯಾದೆ ಕೊಡಬೇಕು. ಫೋಟೊ ಹಾಕಿಲ್ಲ, ಕಟೌಟ್ ನಿಲ್ಸಿಲ್ಲ ಅಂತ, ಥಿಯೇಟರ್ನಲ್ಲಿ ಕಚ್ಚಾಡದೆ ಎಲ್ಲರೂ ಕೂತು ನೋಡಬೇಕು.
‘ಏಕೆಂದರೆ ಕುರುಕ್ಷೇತ್ರದಂತಹ ಸಿನಿಮಾ ಮಾಡುವುದೇ ದೊಡ್ಡ ಕಷ್ಟ. ಮುನಿರತ್ನ ಈ ರೀತಿ ಸಿನಿಮಾ ಮಾಡಿದ್ದಾರೆ. ಇಲ್ಲಿ ಯಾರಿಗೋ ಕಟೌಟ್ ಹಾಕಲಿಲ್ಲ. ಇನ್ನೊಂದು ಮಾಡಿಲ್ಲ ಎಂದು ಗಲಾಟೆ ಮಾಡಬಾರದು. ಮನೆ ಮಂದಿಯಲ್ಲಾ ಕುಳಿತು ಒಬ್ಬ ದುರ್ಯೋಧನನನ್ನು, ಒಬ್ಬ ಅರ್ಜುನನನ್ನು, ಒಬ್ಬ ಕರ್ಣನನ್ನು ಹೇಗೆ ನೋಡ್ತಿರಾ... ಅದನ್ನು ನೋಡಿ... ಇದೇ ನಾನು ನಿಮಗೆ ಕೊಡ್ತಿರೋ ಚಾಲೆಂಜ್. ಯಾರೂ ಗಲಾಟೆ ಮಾಡಿಕೊಳ್ಳದೆ, ತುಂಬಾ ಪ್ರೀತಿಯಿಂದ ಸಿನಿಮಾ ನೋಡಬೇಕು’.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.