ಕನ್ನಡದಲ್ಲಿಮೊಟ್ಟಮೊದಲ ಒಟಿಟಿ ಮೂಲಕ ಬಿಡುಗಡೆಯಾದ ಚಿತ್ರ ‘ಭಿನ್ನ’. ಈ ಸಿನಿಮಾದ ಯಶಸ್ಸಿನನಂತರ ಪರ್ಪಲ್ ರಾಕ್ ಎಂಟರ್ ಟೈನರ್ಸ್ ಮತ್ತು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಸಹಯೋಗದಲ್ಲಿ ನಿರ್ಮಾಣ ಮಾಡುತ್ತಿರುವ ಮತ್ತೊಂದು ಆ್ಯಕ್ಷನ್ ಮತ್ತು ಥ್ರಿಲ್ಲರ್ ಪ್ರಧಾನ ಚಿತ್ರ ‘ಡಿಯರ್ ಸತ್ಯ’.
‘ಜಿಗರ್ ಥಂಡ’ ಖ್ಯಾತಿಯ ಶಿವಗಣೇಶ್ ಈ ಚಿತ್ರ ನಿರ್ದೇಶಿಸಿದ್ದಾರೆ. ಸದಾ ಗಿಜಿಗುಡುವ, ಗದ್ದಲದ ಊರು ಬೆಂಗಳೂರು. ಇಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಒತ್ತಡಗಳು, ಜಂಜಾಟಗಳಿರುತ್ತವೆ. ಇವೆಲ್ಲದರ ನಡುವೆ ಸಾಮಾನ್ಯನೊಬ್ಬ ತನ್ನ ಪ್ರೀತಿ ಉಳಿಸಿಕೊಳ್ಳಲು ಹೆಣಗಾಡುವ, ತನ್ನ ಕನಸುಗಳನ್ನು ಈಡೇರಿಸಿಕೊಳ್ಳಲು ಯತ್ನಿಸುವ ಕಥಾ ಹಂದರ 'ಡಿಯರ್ ಸತ್ಯ'ನದ್ದು. ನಾಯಕನ ವಿರುದ್ಧ ಪಿತೂರಿ ನಡೆಸುವ ಸಂದರ್ಭೋಚಿತ ಘಟನೆಗಳೊಂದಿಗೆ ತೀವ್ರ ತಿರುವು ಪಡೆಯುವ ಅಂಶಗಳನ್ನು ಈ ಕಥೆ ಒಳಗೊಂಡಿದೆಯಂತೆ.
ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಬಹು ನಿರೀಕ್ಷಿತ ಟೀಸರ್ ಸ್ವಾತಂತ್ರ್ಯ ದಿನಾಚರಣೆಯಂದುಪರ್ಪಲ್ ರಾಕ್ ಎಂಟರ್ ಟೈನರ್ಸ್ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಲಿದೆ.
‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’, ‘ಹಳ್ಳಿ ಹೈದ ಪ್ಯಾಟೇಗ್ ಬಂದ’ ರಿಯಾಲಿಟಿ ಶೋಗಳ ನಿರೂಪಕರಾಗಿ, ಬಿಗ್ ಬಾಸ್ ಸೀಸನ್-2ರ ಸ್ಪರ್ಧಿಯಾಗಿದ್ದವರು ಆರ್ಯನ್ ಸಂತೋಷ್. ನೂರು ಜನ್ಮಕು ಚಿತ್ರದ ಮೂಲಕ ನಾಯಕನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಂಡಿದ್ದ ಆರ್ಯನ್ ಸಂತೋಷ್ ಈಗ 'ಡಿಯರ್ ಸತ್ಯ'ನಾಗಿ ರೀ ಎಂಟ್ರಿ ನೀಡುತ್ತಿದ್ದಾರೆ.
ಇವರ ಜೊತೆಗೆ ಅರ್ಚನಾ ಕೊಟ್ಟಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಅರುಣಾ ಬಾಲರಾಜ್, ಅಶ್ವಿನ್ ರಾವ್ ಪಲ್ಲಕ್ಕಿ, ಅರವಿಂದ್ ರಾವ್, ಅಪ್ಪಣ್ಣ, ಗುರುರಾಜ ಹೊಸಕೋಟೆ, ಆದರ್ಶ್ ಚಂದ್ರಕರ್ ತಾರಾಗಣವಿದೆ.
ಆ ದೃಶ್ಯ, ತ್ರಾಟಕ ಮುಂತಾದ ಸಿನಿಮಾಗಳ ಮೂಲಕ ಹೆಸರು ಮಾಡಿರುವ ವಿನೋದ್ ಭಾರತಿ ಛಾಯಾಗ್ರಹಣ ಮಾಡಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಸುರೇಶ್ ಆರ್ಮುಗಂ ಸಂಕಲನ, ಭಜರಂಗಿ ಮೋಹನ್, ಕಲೈ ಮತ್ತು ಗೀತಾ ನೃತ್ಯ ಸಂಯೋಜನೆ, ಕುಂಗ್ಫು ಚಂದ್ರು ಸಾಹಸ ನಿರ್ದೇಶನ, ಭಾರ್ಗವಿ ವಿಖ್ಯಾತಿ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.