ಕನ್ನಡ ಚಿತ್ರದಲ್ಲಿ ನಿರ್ದೇಶನ, ನಟನೆ ಹಾಗೂ ನಿರ್ಮಾಣದಲ್ಲಿ ಹೆಸರು ಮಾಡಿ ‘ಕಲಾ ಸಮ್ರಾಟ್’ ಎಂದೇ ಗುರುತಿಸಿಕೊಂಡಿರುವ ಎಸ್.ನಾರಾಯಣ್, ಕಿರುತೆರೆಯ ಮೂಲಕ ಮತ್ತೆ ನಟನೆಗೆ ಮರಳಿದ್ದಾರೆ. ಅವರು ಈ ಬಾರಿ ಜಿ. ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪಾರು’ ಧಾರಾವಾಹಿಯಲ್ಲಿ ನಟಿಸಿದ್ದಾರೆ.
ಈಗ ‘ಪಾರು’ ಧಾರಾವಾಹಿಯಲ್ಲಿ ಹೊಸ ಕಥೆ ಎಳೆಯೊಂದು ಶುರುವಾಗಿದ್ದು, ಅದರಲ್ಲಿ ಬರುವ ವಿಭಿನ್ನ ಪಾತ್ರವೊಂದಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಈ ಧಾರಾವಾಹಿಯಲ್ಲಿನ ಅರಸನಕೋಟೆ ಅಖಿಲಾಂಡೇಶ್ವರಿಯ ದಿಟ್ಟ ಮಾತುಗಳು, ಮುದ್ದಾದ ಹುಡುಗಿ ಪಾರುವಿನ ಮುಗ್ಧತೆ, ಆದಿತ್ಯನ ಶಿಸ್ತು, ಪ್ರೀತಮ್ ಮಾಡುವ ತರಲೆ ವೀಕ್ಷಕರ ಗಮನ ಸೆಳೆಯುತ್ತಿವೆ.
ಬೃಹದಾಕಾರದ ಮನೆಗಳು, ಅಖಿಲಾಂಡೇಶ್ವರಿಯಿಂದ ಹಿಡಿದು ಎಲ್ಲಾ ಪಾತ್ರಧಾರಿಗಳು ಧರಿಸೋ ಸೀರೆ, ಒಡವೆಗಳು ವೀಕ್ಷಕರಿಗೂ ಇಷ್ಟವಾಗುತ್ತಿದೆ. ಈ ಧಾರಾವಾಹಿಯ ಕಥಾಹಂದರ ಪ್ರತಿ ಎಪಿಸೋಡಿನಲ್ಲೂವೀಕ್ಷಕರು ಕಾತುರದಿಂದ ಕಾಯುವಂತೆ ಮಾಡುತ್ತಿದೆ. ಅಖಿಲಾಂಡೇಶ್ವರಿ ಪಾತ್ರ ನಿರ್ವಹಿಸುತ್ತಿರುವ ವಿನಯಾ ಪ್ರಸಾದ್ ಅವರಾದಿಯಾಗಿ ಉಳಿದ ಬಹಳಷ್ಟು ಪಾತ್ರಗಳಲ್ಲಿ ತಾರಾ ವರ್ಚಸ್ಸಿನ ನಟ–ನಟಿಯರೇ ಕಾಣಿಸಿಕೊಂಡಿದ್ದು, ವಿಶಿಷ್ಟ ಪಾತ್ರವೊಂದರ ಮೂಲಕ ಎಸ್. ನಾರಾಯಣ್ ಕಿರುತೆರೆಗೆ ಪ್ರವೇಶಿಸಿರುವುದು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಅಖಿಲಾಂಡೇಶ್ವರಿ ತನ್ನ ಇಬ್ಬರು ಮಕ್ಕಳ ಅದ್ದೂರಿ ಮದುವೆಗೆ ತಯಾರಿ ನಡೆಸಿದ್ದರೆ; ಪ್ರೀತಮ್ ತನ್ನ ಪ್ರೀತಿ ಉಳಿಸಿಕೊಳ್ಳಲು ಸಜ್ಜಾಗಿದ್ದಾನೆ. ಅಣ್ಣ ಆದಿತ್ಯ ಮತ್ತು ಪಾರುವಿನ ಸಹಾಯ ತೆಗೆದುಕೊಂಡು ಅಮ್ಮನ ಮನವೊಲಿಸಿ ಪ್ರೀತಿಯನ್ನು ಗೆಲ್ಲಲು ತಯಾರಾಗಿದ್ದಾನೆ. ಆದಿ-ಪಾರು ಅಖಿಲಾಂಡೇಶ್ವರಿಯ ಒಪ್ಪಿಗೆ ಪಡೆದು ಪ್ರೀತುವಿನ ಪ್ರೀತಿಯನ್ನ ಉಳಿಸ್ತಾರಾ? ಆ ಪ್ರೀತಿಯನ್ನ ಉಳಿಸಲು ಅವರು ಯಾವೆಲ್ಲ ಸವಾಲುಗಳನ್ನ ಎದುರಿಸಬೇಕು ಎನ್ನುವುದು ವೀಕ್ಷಕರಿಗೆ ಕೌತುಕ ಸೃಷ್ಟಿಸಿದೆ.
‘ಪಾರು’ ಧಾರಾವಾಹಿ ಸೋಮವಾರದಿಂದ - ಶುಕ್ರವಾರ ರಾತ್ರಿ 9:30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.