ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಿದ್ದರು. ತೆಲುಗು ಮೂಲದ ಅವರು ಕನ್ನಡ ಕಲಿತ ಹಿಂದೆಯೂ ಕುತೂಹಲದ ಸಂಗತಿಯೊಂದಿದೆ.
ಅದು 1975ರ ಬೆಂಗಳೂರು ಗಣೇಶ ಉತ್ಸವದ ಸಂದರ್ಭ. ಅಲ್ಲಿಯವರೆಗೂ ಎಸ್ಪಿಬಿ ಅವರು ತಮಿಳು, ತೆಲುಗು ಇಂಗ್ಲಿಷ್ನಲ್ಲಿಯೇ ಮಾತನಾಡುತ್ತಿದ್ದರಂತೆ.
ಬೆಂಗಳೂರಿನ ಡಿವಿಜಿ ರಸ್ತೆಯಲ್ಲಿ ಆ ವರ್ಷದ ಕಾರ್ಯಕ್ರಮ ಆಯೋಜನೆಯಾಗಿತ್ತು. ‘ನಾನು ಇನ್ನು ಮುಂದೆ ಕನ್ನಡದಲ್ಲಿಯೇ ಮಾತನಾಡುತ್ತೇನೆ’ ಎಂದು ನೆರೆದಿದ್ದ ಸಾವಿರಾರು ಅಭಿಮಾನಿಗಳಿಗೆ ವೇದಿಕೆ ಮೇಲೆಯೇ ಭರವಸೆ ನೀಡಿದರಂತೆ. ಮರುವರ್ಷ ಕನ್ನಡ ಕಲಿತು ಅಭಿಮಾನಿಗಳಿಗೆ ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದು ಅವರ ಹೆಗ್ಗಳಿಕೆ. ಕನ್ನಡದಲ್ಲಿಯೇ ಅವರು ‘ಎದೆತುಂಬಿ ಹಾಡುವೆನು’ ರಿಯಾಲಿಟಿ ಶೋನ ಸರಣಿ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಶಸ್ತಿಗಾಗಿ ಮೂರು ದಶಕಗಳ ಕಾಯಬೇಕಾಯ್ತು...
‘ನಕ್ಕರೆ ಅದೇ ಸ್ವರ್ಗ’ ಚಿತ್ರದ ‘ಕನಸಿದೋ ಮನಸಿದೋ’ ಹಾಡಿನ ಮೂಲಕ ಚಂದನವನದಲ್ಲಿ ಗಾಯನ ಆರಂಭಿಸಿದ ಅವರು ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪಡೆಯಲು ಮೂರು ದಶಕ ಕಾಯಬೇಕಾಯಿತು.
ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ರಾಜ್ಯ ಪ್ರಶಸ್ತಿ ಬಂದಿದ್ದು ‘ಓ ಮಲ್ಲಿಗೆ’ ಸಿನಿಮಾದ ‘ನೇಚರೇ ನಮ್ ಟೀಚರು...’ ಹಾಡಿಗೆ. ಇದು ತೆರೆಕಂಡಿದ್ದು 1997ರಲ್ಲಿ. ಆ ನಂತರ 2004ರಲ್ಲಿ ‘ಸೃಷ್ಟಿ’ ಹಾಗೂ 2007ರಲ್ಲಿ ‘ಸವಿ ಸವಿ ನೆನಪು’ ಸಿನಿಮಾಗಳ ಹಾಡಿಗೆ ಪ್ರಶಸ್ತಿ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.