ಬೆಂಗಳೂರು: ‘ಅತ್ಯಾಚಾರವೇ ಆಗಿರಲಿ ಅಥವಾ ದೈಹಿಕವಾಗಿ ಮಹಿಳೆಯ ಮೇಲೆ ಪುರುಷನೊಬ್ಬ ದೌರ್ಜನ್ಯ ಎಸಗಿದರೂ ಕೊನೆಗೆ ದೂಷಣೆಗೆ ಒಳಗಾಗುವುದು ಮಹಿಳೆಯೇ.ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಕುರುಡರಾಗಬೇಡಿ. ಈ ಕುರಿತು ಧ್ವನಿ ಎತ್ತಿ’ ಎಂದು ಮಾಜಿ ಸಂಸದೆ, ನಟಿ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ,‘ಯುವಕ–ಯುವತಿ ರಾತ್ರಿ 7.30ಕ್ಕೆ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಆ ವೇಳೆಯಲ್ಲಿ ಅಲ್ಲಿಗೆ ಹೋಗಬಾರದಿತ್ತು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ್ದ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ರಮ್ಯಾ, ‘ಇದು ನಿನ್ನ ತಪ್ಪು, ನೀನು ಆ ರೀತಿ ಮಾತನಾಡಬಾರದಿತ್ತು, ನೀನು ಆ ರೀತಿ ಮಾಡಬಾರದಿತ್ತು, ನೀನು ಆ ಉಡುಪನ್ನು ಧರಿಸಬಾರದಿತ್ತು, ತಡರಾತ್ರಿ ನೀನು ಹೊರಗೆ ಹೋಗಬಾರದಿತ್ತು, ಹೊರಗೇ ಹೋಗಬಾರದಿತ್ತು, ಮೇಕ್ಅಪ್ ಹಾಕಿಕೊಳ್ಳಬಾರದಿತ್ತು, ಯಾಕೆ ಕೆಂಪುಬಣ್ಣದ ಲಿಪ್ಸ್ಟಿಕ್..ಹೀಗೆ ನೀನು ಅದು ಮಾಡಬಾರದಿತ್ತು...ಇದು ಮಾಡಬಾರದಿತ್ತು...ನಾವು ಬದಲಾಗಬೇಕು, ನಾವು ಹೊಂದಿಕೊಳ್ಳಬೇಕು...ಈ ಅವಿವೇಕದ ಮಾತುಗಳು ಸಾಕು. ಪ್ರಾಮಾಣಿಕವಾಗಿ ಹೇಳಬೇಕಂದರೆ ಈ ದೂಷಣೆಯನ್ನು ನಾನೂ ಎದುರಿಸಿದ್ದೇನೆ. ಇದು ಇಂದಿಗೆ ಕೊನೆಯಾಗಲಿ’ ಎಂದು ಉಲ್ಲೇಖಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.