ADVERTISEMENT

ಸಮಾಜಕ್ಕೆ ದ್ರೋಣನ ಪಾಠ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 19:30 IST
Last Updated 12 ಸೆಪ್ಟೆಂಬರ್ 2019, 19:30 IST
‘ದ್ರೋಣ’ ಚಿತ್ರದಲ್ಲಿ ಶಿವರಾಜ್‌ಕುಮಾರ್
‘ದ್ರೋಣ’ ಚಿತ್ರದಲ್ಲಿ ಶಿವರಾಜ್‌ಕುಮಾರ್   

ನಟ ಶಿವರಾಜ್‌ಕುಮಾರ್‌ ನಟನೆಯ ‘ದ್ರೋಣ’ ಚಿತ್ರದ ಶೂಟಿಂಗ್‌ ಪೂರ್ಣಗೊಂಡಿದೆ. ಶೀಘ್ರವೇ, ಅವರು ಡಬ್ಬಿಂಗ್‌ ಮಾಡಲಿದ್ದಾರೆ. ಈ ಚಿತ್ರ ನಿರ್ದೇಶಿಸಿರುವುದು ಪ್ರಮೋದ್‌ ಚಕ್ರವರ್ತಿ. ಕಥೆ, ಚಿತ್ರಕಥೆ, ಸಂಭಾಷಣೆಯ ನೊಗವನ್ನು ಅವರೇ ಹೊತ್ತಿದ್ದಾರೆ.

ಶಿವರಾಜ್‌ಕುಮಾರ್‌ ಈ ಚಿತ್ರದ ಮೂಲಕ ಮೊದಲ ಬಾರಿಗೆ ಶಿಕ್ಷಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕೈಯಲ್ಲಿ ಪೆನ್‌ ಹಿಡಿದು ಬೋಧನೆಗಷ್ಟೇ ಅವರು ಸೀಮಿತಗೊಂಡಿಲ್ಲವಂತೆ.

‘ಶಾಲೆಯ ಕಥೆ ಎಂದಾಕ್ಷಣ ಅದರ ಶ್ರೇಯೋಭಿವೃದ್ಧಿ, ಭೂ ವಿವಾದ, ಮಕ್ಕಳಿಗೆ ಬೋಧನೆ, ಶಾಲೆಯ ದುಃಸ್ಥಿತಿ, ಅವ್ಯವಹಾರದ ವಿರುದ್ಧ ಸೆಣಸಾಟ ನಡೆಸುವ ನಾಯಕನ ಕಥೆಯೇ ಕಣ್ಮುಂದೆ ಬರುವುದು ಸಹಜ. ಇದರಲ್ಲಿ ಅಂತಹ ಚಿತ್ರಣವಿಲ್ಲ. ರೆಗ್ಯುಲರ್‌ ಫಾರ್ಮೆಟ್‌ನಿಂದ ಹೊರತಾದ ಚಿತ್ರ ಇದು’ ಎಂದು ವಿವರಿಸುತ್ತಾರೆ ನಿರ್ದೇಶಕ ಪ್ರಮೋದ್‌ ಚಕ್ರವರ್ತಿ.

ADVERTISEMENT

‘ಸರ್ಕಾರಿ ಶಾಲೆಯ ಶಿಕ್ಷಕನಿಗೆ ಏನನ್ನೂ ಸಾಧಿಸಲು ಆಗುವುದಿಲ್ಲ ಎನ್ನುವ ಮನಸ್ಥಿತಿ ಜನಸಾಮಾನ್ಯರದು. ಶಿವಣ್ಣ ಸೆಂಟಿಮೆಂಟ್‌, ಕಮರ್ಷಿಯಲ್, ಆ್ಯಕ್ಷನ್‌ ಹಿಟ್‌ ಸಿನಿಮಾ ಕೊಟ್ಟ ಹಿರಿಮೆ ಹೊಂದಿದ್ದಾರೆ. ಅವರ ಅಭಿಮಾನಿಗಳಿಗೆ ಇಷ್ಟವಾಗುವ ಅಂಶಗಳನ್ನು ಇಟ್ಟುಕೊಂಡೇ ಕಥೆ ಹೊಸೆಯಲಾಗಿದೆ. ಅವರ ಕಮರ್ಷಿಯಲ್‌ ಅಂಶಗಳ ಆಧಾರದ ಮೇಲೆ ಚಿತ್ರ ನಿರ್ದೇಶಿಸಿದ್ದೇನೆ.ಕಥೆಯೊಟ್ಟಿಗೆ ಸಾಹಸ ದೃಶ್ಯಗಳೂ ಇವೆ’ ಎನ್ನುತ್ತಾರೆ.

ನೆಲಮಂಗಲ, ಹೆಸರಘಟ್ಟ, ಚನ್ನಪಟ್ಟಣ ಮತ್ತು ಎಚ್‌.ಎಂ.ಟಿ. ಫ್ಯಾಕ್ಟರಿಯಲ್ಲಿ ಶೂಟಿಂಗ್‌ ನಡೆಸಲಾಗಿದೆ. ಜೆ.ಎಸ್. ವಾಲಿ ಅವರ ಛಾಯಾಗ್ರಹಣವಿದೆ. ಚಿತ್ರದ ಐದು ಹಾಡುಗಳಿಗೆ ರಾಮ್ ಕ್ರಿಷ್ ಸಂಗೀತ ಸಂಯೋಜಿಸಿದ್ದಾರೆ. ಬಹುಭಾಷಾ ನಟಿ ಇನಿಯಾ ಈ ಚಿತ್ರದ ನಾಯಕಿ. ರವಿಕಿಶನ್ ಪ್ರಮುಖ ಖಳನಟನಾಗಿ ನಟಿಸಿದ್ದಾರೆ. ಬಿ. ಮಹದೇವ, ಬಿ. ಸಂಗಮೇಶ್‌ ಮತ್ತು ಶೇಷು ಚಕ್ರವರ್ತಿ ಆರ್ಥಿಕ ಇಂಧನ ಒದಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.