ನಟ ‘ದುನಿಯಾ’ ವಿಜಯ್, ಖಳನಾಯಕನ ಪಾತ್ರದಲ್ಲಿ ಟಾಲಿವುಡ್ ಅಂಗಳಕ್ಕೆ ಹೆಜ್ಜೆ ಇಟ್ಟಿರುವ ಸುದ್ದಿ ಎಲ್ಲರಿಗೂ ತಿಳಿದೇ ಇದೆ. ಇದೀಗ ಚಿತ್ರದಲ್ಲಿನ ಅವರ ಪಾತ್ರದ ಹೆಸರು ರಿವೀಲ್ ಆಗಿದೆ.ಖ್ಯಾತ ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರ 107ನೇ ಸಿನಿಮಾದಲ್ಲಿ ‘ಮುಸಲಿ ಮಡುಗು ಪ್ರತಾಪ್ ರೆಡ್ಡಿ’ಯಾಗಿ ವಿಜಯ್ ಕಾಣಿಸಿಕೊಳ್ಳಲಿದ್ದಾರೆ.
ಪಾತ್ರದ ಫಸ್ಟ್ಲುಕ್ ಕೂಡಾ ಬಿಡುಗಡೆಯಾಗಿದ್ದು, ಇದನ್ನು ಇನ್ಸ್ಟಾಗ್ರಾಂನಲ್ಲಿ ವಿಜಯ್ ಹಂಚಿಕೊಂಡಿದ್ದಾರೆ. ‘ಇಂಥ ಖಳನಾಯಕನ ಪಾತ್ರ ನೀಡಿರುವುದಕ್ಕೆ ನಿರ್ದೇಶಕ ಗೋಪಿಚಂದ್ ಅವರಿಗೆ ಧನ್ಯವಾದ. ಖಳನಾಯಕನ ಈ ನೋಟವೇ ಆ ಪಾತ್ರದ ಪೂರ್ಣ ವಿವರಣೆಯನ್ನು ನೀಡುತ್ತದೆ. ಪಾತ್ರ ಹಾಗೂ ಚಿತ್ರದ ಕುರಿತು ಮತ್ತಷ್ಟು ಮಾಹಿತಿಯನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇನೆ’ ಎಂದು ವಿಜಯ್ ಹೇಳಿದ್ದಾರೆ.
‘ಸಲಗ’ ಚಿತ್ರದ ಯಶಸ್ಸಿನ ಬೆನ್ನಲ್ಲೇ ವಿಜಯ್ ಸಿನಿಪಯಣದ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಗೋಪಿಚಂದ್ ನಿರ್ದೇಶಿಸುತ್ತಿರುವ ಈ ಹೊಸ ಚಿತ್ರಕ್ಕೆ ಶೀರ್ಷಿಕೆ ಇನ್ನಷ್ಟೇ ಇಡಬೇಕಿದೆ. ಮೈತ್ರಿ ಮೂವಿ ಮೇಕರ್ಸ್ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನಟಿ ಶೃತಿ ಹಾಸನ್ ಕೂಡಾ ಈ ಚಿತ್ರದಲ್ಲಿದ್ದಾರೆ.
ಈ ಪ್ರೊಜೆಕ್ಟ್ ಪೂರ್ಣಗೊಳಿಸಿ ಮತ್ತೆ ಕನ್ನಡದಲ್ಲಿ ಸಿನಿಮಾವೊಂದನ್ನು ವಿಜಯ್ ನಿರ್ದೇಶಿಸುತ್ತಿದ್ದಾರೆ. ‘ಭೀಮ’ ಎನ್ನುವ ಚಿತ್ರವನ್ನು ವಿಜಯ್ ನಟಿಸಿ, ನಿರ್ದೇಶಿಸಲಿದ್ದಾರೆ. ಇದರ ಫಸ್ಟ್ಲುಕ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.