ಏಳುಮಲೆ
ಬೆಂಗಳೂರು: ‘ಕಾಟೇರ’ ಚಿತ್ರದ ನಿರ್ದೇಶಕ ತರುಣ್ ಸುಧೀರ್, ಅಟ್ಲಾಂಟಾ ನಾಗೇಂದ್ರ ನಿರ್ಮಾಣದ, ಪುನೀತ್ ರಂಗಸ್ವಾಮಿ ನಿರ್ದೇಶನದ ಏಳುಮಲೆ ಚಿತ್ರ ಬಿಡುಗಡೆಯಾಗಿ ಎರಡನೇ ವಾರವೂ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಪಡೆದುಕೊಳ್ಳುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.
ಇದಕ್ಕೆ ಪೂರಕ ಎಂಬಂತೆ ಏಳುಮಲೆ ಕರ್ನಾಟಕದಾದ್ಯಂತ ₹3ಕೋಟಿಗೂ ಅಧಿಕ ಗಳಿಕೆ ಕಂಡು ಮುನ್ನುಗ್ಗುತ್ತಿದೆ ಎನ್ನಲಾಗಿದೆ. ತಮಿಳಿನಲ್ಲಿಯೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಕುರಿತು ಕರ್ನಾಟಕ ಬಾಕ್ಸ್ ಆಫೀಸ್ ಮಾಹಿತಿ ಹಂಚಿಕೊಂಡಿದೆ. ಆದರೆ, ಚಿತ್ರತಂಡ ಅಧಿಕೃತ ಮಾಹಿತಿ ನೀಡಿಲ್ಲ.
ಇನ್ನೇನು ದಸರಾ ಹಬ್ಬದ ಸೀಸನ್ ಹಾಗೂ ದಸರಾ ರಜೆ ಶುರುವಾಗುವುದರಿಂದ ಏಳುಮಲೆ ಸಿನಿಮಾ ಇನ್ನೂ ಹೆಚ್ಚಿನ ಬಾಕ್ಸ್ ಆಫೀಸ್ ಗಳಿಕೆಯನ್ನು ನಿರೀಕ್ಷಿಸುತ್ತಿದೆ.
ಏಳುಮಲೆ ಸಿನಿಮಾ ಕನ್ನಡ, ತಮಿಳಿನಲ್ಲಿ ಸೆ.5ರಂದು ತೆರೆಕಂಡಿತ್ತು. ‘ಏಕ್ ಲವ್ ಯಾ’ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ನಟ ರಾಣಾ, ‘ಮಹಾನಟಿ’ ವಿಜೇತೆ ಪ್ರಿಯಾಂಕಾ ಆಚಾರ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.
ಜಗಪತಿ ಬಾಬು, ಟಿ.ಎಸ್. ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ‘ಏಳುಮಲೆ’ಯ ತಾರಾಬಳಗದಲ್ಲಿದ್ದಾರೆ. ಕರ್ನಾಟಕ - ತಮಿಳುನಾಡು ನಡುವಿನ ಗಡಿಭಾಗದ ಪ್ರೇಮಕಥೆಯನ್ನು ಥ್ರಿಲ್ಲರ್ ಮೂಲಕ ಹೊಂದಿರುವ ಈ ಸಿನಿಮಾಗೆ ಅದ್ವೈತ ಗುರುಮೂರ್ತಿ ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ. ಡಿ. ಇಮ್ಮನ್ ಸಂಗೀತ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.