ತಮಿಳಿನ ಕ್ರೈಮ್ ಥ್ರಿಲ್ಲರ್ ‘ವಿಕ್ರಮ್ ವೇದ’ ಹಿಂದಿಯಲ್ಲಿ ಮಾತ್ರ ರೀಮೇಕ್ ಆಗಲಿದೆ, ತೆಲುಗಿನಲ್ಲಿ ಇಲ್ಲ ಎಂಬುದು ಸ್ಪಷ್ಟವಾಗಿದೆ. ಟಾಲಿವುಡ್ನಲ್ಲಿ ನಂಡಮೂರಿ ಬಾಲಕೃಷ್ಣ ಮತ್ತು ರಾಜಶೇಖರ್ ಜೋಡಿ ನಾಯಕ ಮತ್ತು ಖಳ ನಟರಾಗಿ ನಟಿಸಲಿದ್ದಾರೆ ಎಂಬ ಗಾಳಿಸುದ್ದಿಗೆ ಬ್ರೇಕ್ ಹಾಕಲು ಖುದ್ದಾಗಿ ನಿರ್ಮಾಪಕರೇ ಹೇಳಿಕೆ ನೀಡಿದ್ದು, ಗಾಳಿಸುದ್ದಿ ಹರಡದಂತೆ ಮನವಿ ಮಾಡಿದ್ದಾರೆ.
ವೈನಾಟ್ ಸಂಸ್ಥೆ ಹೊರಡಿಸಿರುವ ಪ್ರಕಟಣೆಯಿಂದ ಟಾಲಿವುಡ್ ಸಿನಿಪ್ರಿಯರಿಗೆ ಇದರಿಂದ ಬೇಸರವಾಗಿದೆ. ನಿಷ್ಠಾವಂತ, ಖಡಕ್ ಪೊಲೀಸ್ ಅಧಿಕಾರಿ ಮತ್ತು ಭೂಗತ ಪಾತಕಿಯ ನಡುವಿನ ಕತೆಯನ್ನು ಹೊಂದಿರುವ ‘ವಿಕ್ರಮ್–ವೇದ’ ಪಾತ್ರಗಳಲ್ಲಿ ತಮ್ಮ ನೆಚ್ಚಿನ ನಟರನ್ನು ಕಾಣುವ ಕನಸು ಕಾಣುತ್ತಿದ್ದ ಸಿನಿರಸಿಕರು ವೈನಾಟ್ನ ಮೇಲೆ ಮುನಿಸಿಕೊಂಡಿದ್ದಾರೆ. ಇಷ್ಟಾದರೂ ಅದು ತನ್ನ ಹೇಳಿಕೆಯಲ್ಲಿ ಪ್ರಸ್ತಾಪಿಸಿರುವಂತೆ ‘ರೀಮೇಕ್ ಮಾಡುವ ಅವಕಾಶ ಮುಕ್ತವಾಗಿದೆ’ ! ಹಾಗಾಗಿ ಟಾಲಿವುಡ್ಪ್ರೇಮಿಗಳ ಆಸೆ ಮತ್ತೆ ಚಿಗುರಿದೆ.
ಬಾಲಕೃಷ್ಣ ಅವರಿಗೆ ‘ಎನ್ಟಿಆರ್ ಕಥಾನಾಯಕುಡು’ ಮತ್ತು ‘ಎನ್ಟಿಆರ್ ಮಹಾನಾಯಕುಡು’ 2019ರಲ್ಲಿ ಅದೃಷ್ಟದೋಟಕ್ಕೆ ಕಿಕ್ ನೀಡುತ್ತದೆ ಎಂದು ನಂಬಲಾಗಿತ್ತು. ಆದರೆ ಚಿತ್ರಗಳು ತೋಪಾಗಿರುವ ಕಾರಣ ‘ವಿಕ್ರಮ್ ವೇದ’ ಮೂಲಕ ಎರಡನೇ ಇನಿಂಗ್ಸ್ ಶುರು ಮಾಡಬಹುದು ಎಂಬ ಲೆಕ್ಕಾಚಾರವಿತ್ತು. ಇದೀಗ ಅದು ತೆಲುಗಿನಲ್ಲಿ ರೀಮೇಕ್ ಆಗುವುದಿಲ್ಲ ಎಂಬುದು ಖಚಿತವಾಗಿದೆ.ನಟ ರಾಜಶೇಖರ್, ಪತ್ತೇದಾರಿ ಸಿನಿಮಾ ‘ಕಲ್ಕಿ’ಯಲ್ಲಿ ನಟಿಸುತ್ತಿದ್ದಾರೆ.
ಕನ್ನಡದ ಬ್ಯೂಟಿಫುಲ್ ಹುಡುಗಿ ಶ್ರದ್ಧಾ ಶ್ರೀನಾಥ್ ‘ವಿಕ್ರಮ್ ವೇದ’ದಲ್ಲಿ ನಾಯಕನಟಿಯಾಗಿ ಪ್ರಬುದ್ಧ ಅಭಿನಯ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.