ADVERTISEMENT

ಏಳು ಸಿನಿಮಾಗಳು ತೆರೆಗೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 14:08 IST
Last Updated 21 ನವೆಂಬರ್ 2024, 14:08 IST
ಮಿಲನಾ ನಾಗರಾಜ್‌
ಮಿಲನಾ ನಾಗರಾಜ್‌   

ಡಾಲಿ ಧನಂಜಯ್‌, ಸತ್ಯದೇವ್‌ ಮುಖ್ಯ ಭೂಮಿಕೆಯಲ್ಲಿರುವ ‘ಜೀಬ್ರಾ’ದ ಕನ್ನಡ ಅವತರಣಿಕೆ ಸೇರಿದಂತೆ ಒಟ್ಟು ಏಳು ಸಿನಿಮಾಗಳು ಇಂದು (ನ.22) ತೆರೆಯಲ್ಲಿವೆ. 

ಮರ್ಯಾದೆ ಪ್ರಶ್ನೆ:

ಸುನೀಲ್ ರಾವ್, ರಾಕೇಶ್ ಅಡಿಗ ಮತ್ತು ಪೂರ್ಣಚಂದ್ರ ಮೈಸೂರು ಮುಖ್ಯಭೂಮಿಕೆಯಲ್ಲಿರುವ ಚಿತ್ರ ‘ಮರ್ಯಾದೆ ಪ್ರಶ್ನೆ’. ನಾಗರಾಜ ಸೋಮಯಾಜಿ ನಿರ್ದೇಶನದ ಚಿತ್ರವನ್ನು ಆರ್‌ಜೆ ಪ್ರದೀಪ್‌ ತಮ್ಮ ಸಕ್ಕತ್‌ ಸ್ಟುಡಿಯೊ ಮೂಲಕ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಪ್ರದೀಪ್‌ ಅವರೇ ಕಥೆ ಬರೆದಿದ್ದಾರೆ. ನಾಗರಾಜ್‌ ಈ ಹಿಂದೆ ‘ದಿ ಬೆಸ್ಟ್ ಆ್ಯಕ್ಟರ್’ ಚಿತ್ರ ನಿರ್ದೇಶಿಸಿದ್ದರು. ಚಿತ್ರಕ್ಕೆ ಸಂದೀಪ್ ವೆಲ್ಲುರಿ ಛಾಯಾಚಿತ್ರಗ್ರಹಣ, ಅರ್ಜುನ್ ರಾಮು ಸಂಗೀತವಿದೆ. ತೇಜು ಬೆಳವಾಡಿ, ಶೈನ್ ಶೆಟ್ಟಿ, ಪ್ರಭು ಮುಂಡ್ಕುರ್, ನಾಗಾಭರಣ, ಪ್ರಕಾಶ್ ತುಮ್ಮಿನಾಡು ಮುಂತಾದವರು ತಾರಾಗಣದಲ್ಲಿದ್ದಾರೆ.

ADVERTISEMENT

ಆರಾಮ್‌ ಅರವಿಂದ್‌ಸ್ವಾಮಿ 

ಅನೀಶ್ ತೇಜೇಶ್ವರ್, ಮಿಲನಾ ನಾಗರಾಜ್ ಜೋಡಿಯಾಗಿ ನಟಿಸಿರುವ ಈ ಚಿತ್ರಕ್ಕೆ ಅಭಿಷೇಕ್‌ ಶೆಟ್ಟಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ‘ನೋಡೋಕೆ ಫುಲ್ ಆರಾಮವಾಗಿರುವ ಅರವಿಂದ್ ಸ್ವಾಮಿ ಲೈಫ್‌ನಲ್ಲಿ ಬರೀ ಟೆನ್ಷನ್‌. ಪ್ರೀತಿ, ಮದುವೆ, ದುಡ್ಡು, ಫ್ಯಾಮಿಲಿ ಸುತ್ತ ಸಾಗುವ ಕಥೆ. ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾವಿದು’ ಎಂದಿದ್ದಾರೆ ನಿರ್ದೇಶಕರು.

ಹೃತಿಕಾ ಶ್ರೀನಿವಾಸ್ ಮತ್ತೋರ್ವ ನಾಯಕಿ. ಅರ್ಜುನ್ ಜನ್ಯ ಸಂಗೀತ, ವೈವಿಬಿ ಶಿವಸಾಗರ್ ಛಾಯಾಚಿತ್ರಗ್ರಹಣ, ಉಮೇಶ್‌ ಆರ್‌.ಬಿ ಸಂಕಲನವಿದೆ. ಶ್ರೀಕಾಂತ್ ಪ್ರಸನ್ನ ಹಾಗೂ ಪ್ರಶಾಂತ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 

ಲವ್‌ ರೆಡ್ಡಿ

ಹೊಸಬರೇ ಸೇರಿ ಮಾಡಿರುವ ನೈಜ ಘಟನೆ ಆಧಾರಿತ ಚಿತ್ರ ‘ಲವ್ ರೆಡ್ಡಿ’. ನಟ ದುನಿಯಾ ವಿಜಯ್‌ ಚಿತ್ರವನ್ನು ಪ್ರೆಸೆಂಟ್‌ ಮಾಡುತ್ತಿದ್ದಾರೆ. ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ಗಡಿ ಭಾಗದಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾ‌ಗೆ ಸ್ಮರಣ್ ರೆಡ್ಡಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಯುವ ನಟ ಅಂಜನ್‌ ರಾಮಚಂದ್ರಗೆ ಶ್ರಾವಣಿ ಜೋಡಿಯಾಗಿದ್ದಾರೆ. ಚಿತ್ರದ ತೆಲುಗು ಅವತರಣಿಕೆ ಈಗಾಗಲೇ ಬಿಡುಗಡೆಗೊಂಡಿದೆ. 

ಪ್ರಭುತ್ವ

ಚೇತನ್ ಚಂದ್ರ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ಮೇಘಡಹಳ್ಳಿ ಶಿವಕುಮಾರ್ ಕಥೆ ಬರೆದು ನಿರ್ದೇಶಿಸಿದ್ದಾರೆ. ರವಿರಾಜ್ ಎಸ್ ಕುಮಾರ್ ನಿರ್ಮಿಸಿದ್ದಾರೆ. ಮತದಾನ ಅಮೂಲ್ಯವಾದ್ದದ್ದು. ಹಾಗಾಗಿ ಮತವನ್ನು ಮಾರಾಟ ಮಾಡಿಕೊಳ್ಳಬಾರದು ಎಂಬ ಸಂದೇಶ ಹೊಂದಿರುವ ಚಿತ್ರವಿದು. ಪಾವನ ಚಿತ್ರದ ನಾಯಕಿ. ಲೋಕೇಶ್, ವಿಜಯ್ ಚೆಂಡೂರ್, ಡ್ಯಾನಿ ಮುಂತಾದವರು ಚಿತ್ರದಲ್ಲಿದ್ದಾರೆ. ಎಮಿಲ್ ಸಂಗೀತ,  ಕೆ.ಎಸ್ ಚಂದ್ರಶೇಖರ್ ಛಾಯಾಚಿತ್ರಗ್ರಹಣವಿದೆ.

ಟೆನೆಂಟ್‌

ಧರ್ಮ ಕೀರ್ತಿರಾಜ್, ತಿಲಕ್ ರಾಜ್ ಅಭಿನಯದ ಚಿತ್ರ ‘ಟೆನೆಂಟ್’. ವಿಎಫ್‌ಎಕ್ಸ್‌ ತಜ್ಞರಾಗಿರುವ ಶ್ರೀಧರ್ ಶಾಸ್ತ್ರೀ ಈ ಚಿತ್ರಕ್ಕೆ ಕಥೆ ಬರೆದು, ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಮಾಸ್ಟರ್ ಚಾಯ್ಸ್ ಕ್ರಿಯೇಷನ್‌ ಅಡಿಯಲ್ಲಿ ನಾಗರಾಜ್ ಟಿ ಬಂಡವಾಳ ಹೂಡಿದ್ದಾರೆ.

‘ಕ್ರೈಂ, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಿದು. ಸೋನು ಗೌಡ, ರಾಕೇಶ್ ಮಯ್ಯ ಹಾಗೂ ಉಗ್ರಂ ಮಂಜು ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ಗಿರೀಶ್ ಹೋತೂರ್ ಸಂಗೀತ, ಉಜ್ವಲ್ ಚಂದ್ರ ಸಂಕಲನ, ಮನೋಹರ್ ಜೋಷಿ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. 

ಅಂಶು

ಕಿರುತೆರೆ ನಟಿ ನಿಶಾ ರವಿಕೃಷ್ಣನ್ ನಾಯಕಿಯಾಗಿ ನಟಿಸಿರುವ ‘ಅಂಶು’ ಚಿತ್ರ ನವೆಂಬರ್ 21ರಂದು ತೆರೆ ಕಂಡಿದೆ. ಸಸ್ಪೆನ್ಸ್‌, ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಚಿತ್ರಕ್ಕೆ ಎಂ.ಸಿ ಚನ್ನಕೇಶವ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.