ADVERTISEMENT

ನಟಿಗೆ ಬೆದರಿಕೆ: ಮಲಯಾಳ ಚಿತ್ರ ನಿರ್ಮಾಪಕನ ಬಂಧನ

ಪಿಟಿಐ
Published 5 ಮೇ 2022, 15:57 IST
Last Updated 5 ಮೇ 2022, 15:57 IST
   

ತಿರುವನಂತಪುರ: ಮಲಯಾಳ ನಟಿ ಮಂಜು ವಾರಿಯರ್‌ ಅವರಿಗೆ ಬೆದರಿಕೆಯೊಡ್ಡಿದ ಆರೋಪದಲ್ಲಿ ಚಿತ್ರ ನಿರ್ಮಾಪಕ ಸನಲ್‌ ಕುಮಾರ್‌ ಶಶಿಧರನ್‌ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಅಪಪ್ರಚಾರ ಮಾಡುವ ಮೂಲಕ ತಮ್ಮ ಘನತೆಗೆ ಧಕ್ಕೆ ತಂದಿದ್ದಾರೆ ಹಾಗೂ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿಮಂಜು ವಾರಿಯರ್‌ ನೀಡಿರುವ ದೂರಿನ ಅನ್ವಯ ಸನಲ್‌ ಅವರನ್ನು ಕೊಚ್ಚಿಯಲ್ಲಿ ಬಂಧಿಸಲಾಗಿದೆ. ಈ ಬಗ್ಗೆ ಕೊಚ್ಚಿ ಸಮೀಪದ ಎಲಮಕ್ಕರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರು ಬಂಧಿಸುವ ಕೆಲ ಕ್ಷಣಗಳ ಹಿಂದೆ ಫೇಸ್‌ಬುಕ್‌ ಲೈವ್‌ ಬಂದಿದ್ದ ನಿರ್ಮಾಪಕ ತನ್ನ ಜೀವಕ್ಕೆ ಅಪಾಯವಿದೆ ಎಂದು ಆರೋಪಿಸಿದ್ದರು.

ADVERTISEMENT

ಫೇಸ್‌ಬುಕ್‌ನಲ್ಲಿ ಸರಣಿ ಪೋಸ್ಟ್‌ ಮಾಡಿರುವ ಸನಲ್‌, ನಟಿಯ ಪ್ರಾಣಕ್ಕೆ ಅಪಾಯವಿದೆ. ಆಕೆ ಪಟ್ಟಭದ್ರ ಹಿತಾಸಕ್ತಿಗಳ ಹಿಡಿತಕ್ಕೆ ಸಿಲುಕಿದ್ದಾಳೆ ಎಂದಿದ್ದರು. ಅಲ್ಲದೆ ಆಕೆಯ ಇಬ್ಬರು ವ್ಯವಸ್ಥಾಪಕರ ವಿರುದ್ಧವೂ ಗಂಭೀರ ಆರೋಪ ಮಾಡಿದ್ದರು. ಜತೆಗೆ ಇತ್ತೀಚಿಗೆ ತೃತೀಯ ಲಿಂಗಿಯೊಬ್ಬರ ಸಾವಿನ ಬಳಿಕ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ರಾಷ್ಟ್ರಪತಿ ಮತ್ತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಬರೆದ ಪತ್ರವನ್ನೂ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.