ADVERTISEMENT

ಕನ್ನಡ ಹುಡುಗ -ಮರಾಠಿ ಬೆಡಗಿಯ ಪ್ರೇಮ ಕಹಾನಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 19:30 IST
Last Updated 9 ಜನವರಿ 2020, 19:30 IST
ಪ್ರಭುಸೂರ್ಯ ಹಾಗೂ ನಾಗ್‌ ಹುಣಸೋಡ್‌
ಪ್ರಭುಸೂರ್ಯ ಹಾಗೂ ನಾಗ್‌ ಹುಣಸೋಡ್‌   

‘ಗಡಿನಾಡು’ ಅಂದಾಕ್ಷಣ ಇದೊಂದು ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ವಿವಾದಕ್ಕಷ್ಟೇ ಸೀಮಿತವಾದ ಸಿನಿಮಾವಲ್ಲ. ಬೆಳಗಾವಿಯ ಗಡಿಭಾಗದಲ್ಲಿ ಮಹಾರಾಷ್ಟ್ರ ಮಾಡುವ ಕಿತಾಪತಿ, ಅಧಿಕಾರಕ್ಕಾಗಿ ರಾಜಕಾರಣಿಗಳು ಮತದಾರರಿಗೆ ಹೇಗೆಲ್ಲಾ ಮಂಕುಬೂದಿ ಎರಚುತ್ತಾರೆ ಎಂಬ ಗಂಭೀರ ವಿಷಯವಿಟ್ಟುಕೊಂಡು ತಯಾರಾದ ಸಿನಿಮಾ ಇದು. ಇದರೊಟ್ಟಿಗೆ ಕನ್ನಡದ ಹುಡುಗ ಮತ್ತು ಮರಾಠಿ ಹುಡುಗಿಯ ಪ್ರೀತಿಯ ಎಳೆಯೂ ಇದೆಯಂತೆ.

ಗಡಿ ವಿವಾದ ಮತ್ತು ಪ್ರೀತಿಯ ಎರಡೂ ಎಳೆಗಳ ನಡುವೆ ಸಿಲುಕಿಕೊಳ್ಳುವ ಅಮಾಯಕ ನಾಯಕ –ನಾಯಕಿ ಅವುಗಳನ್ನು ಹೇಗೆ ಎದುರಿಸುತ್ತಾರೆ ಮತ್ತು ಪರಿಹರಿಸಿಕೊಂಡು ಹೊರಬರುತ್ತಾರೆ ಎನ್ನುವುದೇ ಈ ಸಿನಿಮಾದ ಕಥೆ. ‘ಈ ಚಿತ್ರ ಬಿಡುಗಡೆಯಾದ ಬಳಿಕ ಗಡಿಭಾಗದಲ್ಲಿ ಗಲಾಟೆಯಾಗುವುದು ನಿಶ್ಚಿತ’ ಎಂದರು ನಿರ್ದೇಶಕ ನಾಗ್‌ ಹುಣಸೋಡ್‌.

‘ಅಥಣಿ ಸೇರಿದಂತೆ ಮಹಾರಾಷ್ಟ್ರದ ಗಡಿಭಾಗದಲ್ಲಿ ಅಧ್ಯಯನ ನಡೆಸಿಯೇ ಈ ಕಥೆ ಹೆಣೆದಿದ್ದೇನೆ. ಪ್ರೇಕ್ಷಕರಿಗೆ ವಾಸ್ತವಾಂಶ ತಿಳಿಸುವುದೇ ನನ್ನ ಉದ್ದೇಶ. ಬೆಳಗಾವಿ ಗಡಿ ವಿವಾದವನ್ನು ಜೀವಂತವಾಗಿಡುವುದೇ ಶಿವಸೇನೆಯ ಮೂಲ ಉದ್ದೇಶ’ ಎಂದು ದೂರಿದರು.

ADVERTISEMENT

ಪ್ರಭುಸೂರ್ಯ ಮತ್ತು ಸಂಚಿತಾ ಪಡುಕೋಣೆ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚರಣ್‌ರಾಜ್‌, ದೀಪಕ್‌ ಶೆಟ್ಟಿ, ಶೋಭರಾಜ್‌ ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

ಚಿತ್ರದ ಮೂರು ಹಾಡುಗಳಿಗೆ ಎಲ್ವಿನ್‌ ಜೋಶ್ನಾ ಸಂಗೀತ ಸಂಯೋಜಿಸಿದ್ದಾರೆ. ಗೌರಿ ವೆಂಕಟೇಶ್‌ ಅವರ ಛಾಯಾಗ್ರಹಣವಿದೆ. ವಸಂತ್‌ ಮುರಾರಿ ದಳವಾಯಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಜನವರಿ 24ರಂದು ‘ಗಡಿನಾಡು’ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.