ಚಂದನವನದಲ್ಲಿ 'ಎಣ್ಣೆ' ಸಾಂಗ್ ಅಂದ್ರೆ ನೆನಪಾಗುವುದು ನಿರ್ದೇಶಕ ಯೋಗರಾಜ್ ಭಟ್. ಅವರು ಬರೆದ ‘ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫ್‘ ಹಾಡು ಸಿಕ್ಕಾಪಟ್ಟೆ ಖ್ಯಾತಿಯಾಗಿತ್ತು.
ಇದೀಗ ಯೋಗರಾಜ್ ಭಟ್ ಅವರು ‘ಗಿರ್ಕಿ‘ ಸಿನಿಮಾಗಾಗಿ ಮತ್ತೊಂದು ಎಣ್ಣೆ ಸಾಂಗ್ ಬರೆದಿದ್ದಾರೆ. ಅವರು ಬರೆದ ‘ಗ್ಲಾಸು ಗ್ಲಾಸಿಗೆ ತಾಗೋ ಟೈಮಲಿ ದೇಶ ಚಿಂತನೆ ಮಾಡೋಣ‘ ಹಾಡು ಬಿಡುಗಡೆಯಾಗಿದೆ. ವಿಜಯ್ ಪ್ರಕಾಶ್ ಈ ಹಾಡಿಗೆ ದನಿಯಾಗಿದ್ದಾರೆ.
ಯುಟ್ಯೂಬ್ನಲ್ಲಿ ಬಿಡುಗಡೆಯಾಗಿರುವ ಲಿರೀಕಲ್ ಹಾಡನ್ನು ಸಾವಿರಾರು ಜನರು ವೀಕ್ಷಣೆ ಮಾಡಿದ್ದಾರೆ. ಹಾಡಿಗೆ ಸಿನಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದೆ ಎಂದು ಚಿತ್ರತಂಡ ಹೇಳಿದೆ.
ಪ್ರೀತಿ, ಥ್ರಿಲ್ಲರ್ ಹಾಗೂ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವೀರೇಶ್ ಪಿ.ಎಂ. ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಸಹ ಇವರೇ ಬರೆದಿದ್ದಾರೆ.
ವಾಸುಕಿ ಭುವನ್ ಅವರ ಸಹ ನಿರ್ಮಾಣವಿರುವ ಈ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ. ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ವೀರೇಶ್ ಪಿ.ಎಂ. ಹಾಡುಗಳನ್ನು ಬರೆದಿದ್ದಾರೆ. ನವೀನ್ ಕುಮಾರ್ ಛಲ್ಲ ಛಾಯಾಗ್ರಹಣ, ಮಧು ತುಂಬಕೆರೆ ಅವರ ಸಂಕಲನವಿರುವ ಈ ಚಿತ್ರಕ್ಕೆ ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಹಾಗೂ ರಾಮು, ಮೋಹನ್ ಅವರ ನೃತ್ಯ ನಿರ್ದೇಶನವಿದೆ.
ಕಿರುತೆರೆಯಲ್ಲಿ ಕಾಮಿಡಿ ಮೂಲಕ ಮನೆಮಾತಾಗಿರುವ ತರಂಗ ವಿಶ್ವ ಹಾಗೂ ವಿಲೋಕ್ ರಾಜ್ ಚಿತ್ರದ ನಾಯಕರು. ದಿವ್ಯ ಉರುಡುಗ ಹಾಗೂ ರಾಶಿ ಮಹದೇವ್ ನಾಯಕಿಯರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.