ಮೊದಲೆರಡು ಚಿತ್ರಗಳ ಸೋಲಿನ ನಂತರ ಹೊಸ ದಾರಿಯ ಅನ್ವೇಷಣೆಯಲ್ಲಿದ್ದ ರಾಜ್ಕುಮಾರ್ ಕುಟುಂಬದ ಕುಡಿ ವಿನಯ್ ರಾಜ್ಕುಮಾರ್ ಅವರಿಗೆ ಸಿಕ್ಕಿದ್ದು ‘ಅನಂತು ವರ್ಸಸ್ ನುಸ್ರತ್’ ಮತ್ತು ‘ಗ್ರಾಮಾಯಣ’ ಸಿನಿಮಾಗಳು.
‘ಅನಂತು...’ ತೆರೆಗೆ ಬರುವ ಮುನ್ನವೇ ವಿನಯ್ ನಾಯಕನಾಗಿ ನಟಿಸುತ್ತಿರುವ ‘ಗ್ರಾಮಾಯಣ’ ಸಿನಿಮಾ, ಟೀಸರ್ ಬಿಡುಗಡೆಯ ಮೂಲಕ ಸಾಕಷ್ಟು ಸುದ್ದಿ ಮಾಡಿತ್ತು. ಹಳ್ಳಿ ಬಿಟ್ಟು ಬೇರೆ ಬೇರೆ ನಗರ, ದೇಶಗಳಲ್ಲಿ ವಾಸಿಸುತ್ತಿರುವವರು ತಮ್ಮ ಹಳ್ಳಿಯನ್ನು ನೆನಪಿಸಿಕೊಂಡ ದೃಶ್ಯತುಣುಕುಗಳನ್ನು ಹೊಂದಿದ್ದ ಈ ಟೀಸರ್, ಸಿನಿಮಾ ಕುರಿತು ಕುತೂಹಲ ಹುಟ್ಟಿಸುವಂತಿತ್ತು. ಹಾಗೆಯೇ ಈ ಚಿತ್ರದಲ್ಲಿ ವಿನಯ್ ಅಪ್ಪಟ ಹಳ್ಳಿ ಹೈದನ ಲುಕ್ನಲ್ಲಿ ಕಾಣಿಸಿಕೊಂಡಿದ್ದರು.
ಹೆಸರಿಗೆ ತಕ್ಕ ಹಾಗೆಯೇ ಹಳ್ಳಿಯ ಹಿನ್ನೆಲೆಯಲ್ಲಿಯೇ ನಡೆಯುವ ಈ ಕಥೆಯನ್ನು ದೇವನೂರು ಚಂದ್ರು ನಿರ್ದೇಶಿಸುತ್ತಿದ್ದಾರೆ. ಆದರೆ ಶೂಟಿಂಗ್ ಶುರುವಾದ ಕೆಲದಿನಗಳಲ್ಲಿಯೇ ಚಿತ್ರ ನಿಂತುಹೋಗಿದೆ ಎಂಬ ಸುದ್ದಿ ಹಬ್ಬಿತ್ತು. ಅದಕ್ಕೆ ಕಾರಣ ನಿರ್ಮಾಪಕ ಎನ್ಎಲ್ಎನ್ ಮೂರ್ತಿ ಅವರಿಗೆ ಎದುರಾದ ಹಣಕಾಸಿನ ಸಮಸ್ಯೆ. ಮೂಲದ ಪ್ರಕಾರ ಕೆಲದಿನಗಳ ಕಾಲ ‘ಗ್ರಾಮಾಯಣ’ ಚಿತ್ರೀಕರಣ ನಿಂತಿದ್ದು ನಿಜ. ಮತ್ತೆ ಶುರುವಾಗುತ್ತದೋ ಇಲ್ಲವೋ ಎಂದು ಆತಂಕ ಹುಟ್ಟುವಂತೆ ಆಗಿದ್ದೂ ನಿಜ. ಆದರೆ ಆ ಆತಂಕಗಳನ್ನೆಲ್ಲ ಬದಿಗೊತ್ತುವ ಹಾಗೆ ‘ಗ್ರಾಮಾಯಣ’ ಮತ್ತೆ ಶುರುವಾಗಿದೆ. ಕಳೆದ ವಾರ ಹೆಸರಘಟ್ಟದಲ್ಲಿ ಚಿತ್ರದ ಕೆಲವು ಭಾಗಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಈಗ ನಿರ್ಮಾಪಕರ ಹಣಕಾಸಿನ ಸಮಸ್ಯೆಗಳೆಲ್ಲ ಬಗೆಹರಿದಿದ್ದು ಆದಷ್ಟು ಬೇಗ ಚಿತ್ರೀಕರಣ ಮುಗಿಸುವ ಉತ್ಸಾಹದಲ್ಲಿ ತಂಡ ಇದೆ. ಅಂದಹಾಗೆ ಈ ಚಿತ್ರದಲ್ಲಿ ವಿನಯ್, ‘ಸಿಕ್ಸ್ ಸೆನ್ಸ್ ಸೀನ’ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಮೃತಾ ಅಯ್ಯರ್ ನಾಯಕಿಯಾಗಿ ನಟಿಸುತ್ತಿರುವ ‘ಗ್ರಾಮಾಯಣ’ಕ್ಕೆ ಅಭಿಷೇಕ್ ಕಾಸರಗೋಡು ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಇರಲಿದೆ. ಧರ್ಮಣ್ಣ ಅವರೂ ಮುಖ್ಯಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.