‘ಹೌಸ್ಫುಲ್’, ‘ನಿಂಬೆಹುಳಿ’ ಚಿತ್ರಗಳ ನಿರ್ದೇಶಕರಾದ ಹೇಮಂತ್ ಹೆಗಡೆ, ಇದೀಗ ಮತ್ತೊಂದು ಹಾಸ್ಯಪ್ರಧಾನ ಸಿನಿಮಾ ‘ನಮ್ ಮಾಣಿ ಮದ್ವೆ ಪ್ರಸಂಗ’ಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಹೇಮಂತ್ ಹೆಗಡೆ ಹೆಗಡೆಯವರೇ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಐಟಿ, ವೈದ್ಯ ವೃತ್ತಿಯಲ್ಲಿ ಇರುವ ಹುಡುಗರನ್ನು ಮದುವೆಯಾಗಲು ಹುಡುಗಿಯರು ಮುಗಿಬೀಳುತ್ತಿರುವುದು ಹಾಗೂ ಕೃಷಿಕರಾಗಿರುವ ಯುವಕರತ್ತ ಹುಡುಗಿಯರೇ ಸುಳಿಯದೇ ಇರುವ ರೀತಿಯಲ್ಲಿ ಪೋಸ್ಟರ್ ವಿನ್ಯಾಸಗೊಳಿಸಲಾಗಿದೆ. ಮಲೆನಾಡಿನ ಹುಡುಗರಿಗೆ ಹುಡುಗಿ ಸಿಗುತ್ತಿಲ್ಲ ಎನ್ನುವ ಅಂಶವೇ ಚಿತ್ರಕಥೆ.
ಚಿತ್ರದಲ್ಲಿ ನಾಯಕಿಯಾಗಿ ಮರಾಠಿಯ ಲೋಪಮುದ್ರ ರಾವುತ್ ನಟಿಸಲಿದ್ದಾರೆ. ಪದ್ಮಜಾ ರಾವ್, ರಮೇಶ್ ಭಟ್, ಶರತ್ ಲೋಹಿತಾಶ್ವ ತಾರಾಗಣದಲ್ಲಿದ್ದಾರೆ. ‘ಉತ್ತರ ಕನ್ನಡ, ಶೃಂಗೇರಿ ಹಾಗೂ ಉತ್ತರ ಭಾರತದಲ್ಲಿ ಚಿತ್ರೀಕರಣಕ್ಕೆ ಚಿತ್ರತಂಡವು ನಿರ್ಧರಿಸಿದ್ದು, ಆಗಸ್ಟ್ನಿಂದ ಚಿತ್ರೀಕರಣ ಆರಂಭವಾಗಲಿದೆ. ಕೃಷಿಕನಾಗಿರುವ 35 ವರ್ಷದ ನಾಯಕ ಹುಡುಗಿ ಹುಡುಕಲು ಪಡುವ ಪಾಡನ್ನು ಅದರಲ್ಲಿರುವ ಕಿತಾಪತಿಯನ್ನು ಚಿತ್ರಕಥೆ ಹೊಂದಿದೆ. ಕಳೆದ ಐದು ವರ್ಷದಿಂದ ಕೇವಲ ಹವ್ಯಕರಿಗೆ ಎಂದಲ್ಲ ಮಲೆನಾಡಿನ ಹುಡುಗರಿಗೆ ಹುಡುಗಿ ಸಿಗುತ್ತಿಲ್ಲ. ಇದೊಂದು ಸಾಮಾಜಿಕ ಪಿಡುಗಾಗಿದೆ ಎನ್ನುತ್ತಾರೆ ಹೇಮಂತ್ ಹೆಗಡೆ. ಮೂವರು ಎನ್ಆರ್ಐಗಳು ಚಿತ್ರದ ನಿರ್ಮಾಪಕರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.